ಉಡುಪಿ: ಮಂಗಳೂರಿನ ಕಂಕನಾಡಿಯಲ್ಲಿ ನಮಾಜ್ ಮಾಡುವ ಸ್ಥಳದಲ್ಲಿ ಜನಸಂಖ್ಯೆ ತುಂಬಿಕೊಂಡಿತ್ತು, ನಾಲ್ಕೈದು ಮಂದಿಗೆ ಸ್ಥಳ ಇರಲಿಲ್ಲವಾಗಿದ್ದ ಕಾರಣ ಎರಡು ನಿಮಿಷ ನಮಾಜ್ ಮಾಡಿ ಎದ್ದು ಹೋಗಿದ್ದಾರೆ, ಆದರೆ ಅದನ್ನೇ ದೊಡ್ಡ ರಾದ್ದಾಂತ ಮಾಡುತ್ತಿದ್ದಾರೆ ಎಂದು ಎಸ್ ಡಿಪಿಐ ವಕ್ತಾರ ರಿಯಾಜ್ ಕಡಂಬು ಹೇಳಿದ್ದಾರೆ.
ರಸ್ತೆಯಲ್ಲಿ ನಮಾಜ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಿಯಾಜ್ ಕಡಂಬು, ಕಾನೂನು ವಿರುದ್ಧವಾಗಿ ನಮಾಜ್ ನಡೆದಿದ್ದರೆ ಅದನ್ನು ನೋಡಿಕೊಳ್ಳಲು ಪೊಲೀಸ್ ಇಲಾಖೆ ಇದೆ, ಆದರೆ ಬಜರಂಗದಳದವರು ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದರೆ ನಾವು ಕೈ ಕಟ್ಟಿ ಕುಳಿತಿಲ್ಲ ಎಂದು ಹೇಳಿದ್ದಾರೆ.
ನಮಾಜ್ ನಡೆಸಿರುವುದನ್ನು ವಿರೋಧಿಸಿ ಶರಣ್ ಪಂಪ್ ವೆಲ್ ಹೇಳಿಕೆ ನೀಡಿದ್ದು, ತಾಕತ್ತಿದ್ದರೆ ಶರಣ್ ಪಂಪ್ ವೆಲ್ ಅದನ್ನು ಮಾಡಿ ನೋಡಲಿ ಎಂದು ಸವಾಲು ಹಾಕಿರುವ ರಿಯಾಜ್, ಗಣೇಶೋತ್ಸವ ಸಂದರ್ಭದಲ್ಲಿ ಇಡೀ ರಸ್ತೆಯನ್ನು ಬಂದ್ ಮಾಡಿ ಮೆರವಣಿಗೆ ಮಾಡುತ್ತೇವೆ, ಅದು ಆಯಾ ಧರ್ಮದ ಆಚರಣೆ ಅದನ್ನು ಗೌರವಿಸಬೇಕು ಬದಲಾಗಿ ವಿರೋಧಿಸಿ ಕೋಮುಗಲಭೆ ಸೃಷ್ಟಿ ಮಾಡಬಾರದು ಎಂದು ಹೇಳಿದ್ದಾರೆ.
ಕದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಕಳೆದ ಶುಕ್ರವಾರ ನಡೆದಿದ್ದ ನಮಾಜ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೇ, ಕದ್ರಿ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿತ್ತು