ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರದ್ದು ಎನ್ನಲಾದ ಮಹಿಳೆಯೊಬ್ಬರ ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಶಾಸಕ ಮಠಂದೂರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.ಬೆಂಗಳೂರಿನ ಗಾಂಧಿನಗರದಲ್ಲಿರುವ ಹಲಸೂರು ಗೇಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಮಠಂದೂರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ
ಚುನಾವಣಾ ಸಂದರ್ಭ, ಅದರಲ್ಲೂ ಟಿಕೆಟ್ ಘೋಷಣೆಗೆ ಪಕ್ಷ ಸಿದ್ದತೆ ನಡೆಸುತ್ತಿರುವ ವೇಳೆ ಮಾನ ಹಾನಿ ಮಾಡುವ ದುರುದ್ದೇಶದಿಂದ ಎಡಿಟೆಡ್ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿರುವುದಾಗಿ ಶಾಸಕ ಮಠಂದೂರು ತಿಳಿಸಿದ್ದಾರೆ.
ಇನ್ನು ಇದೇ ಪ್ರಕರಣದ ಕುರಿತು ಫೋಟೊದಲ್ಲಿರುವ ಮಹಿಳೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ. ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೊಗಳು ಅಸಲಿ ಅಲ್ಲ ಎಂದಿದ್ದಾರೆ. ತೇಜೋವಧೆ ಮಾಡುವ ಉದ್ದೇಶದಿಂದ ಯಾರೋ ಈ ಕೃತ್ಯ ಎಸಗಿದ್ದಾರೆ. ತಪ್ಪಿತಸ್ಥರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಬೇಕೇಂದು ಅವರು ಅಗ್ರಹಿಸಿದ್ದಾರೆ.
ಈ ಪ್ರಕರಣ ರಾಜಕೀಯ ಸಂಚಲನ ಸೃಷ್ಟಿಸಿದ್ದು ಪುತ್ತೂರು ಬಿಜೆಪಿಯು ಈ ಕುರಿತು ವಿವಿಧ ಸ್ಥರದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ . ಟಿಕೆಟ್ ಘೋಷಣೆಗೆ ಬೆರಳೆಣಿಕೆಯ ದಿನಗಳಿರುವಾಗ ನಡೆದ ಈ ಘಟನೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ . ಅಭ್ಯರ್ಥಿ ಬದಲಾವಣೆ ಸಹಿತ ಹಲವು ಆಯಾಮಗಳಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿದೆ ಎನ್ನಲಾಗಿದೆ.