ಮುಂಬಯಿ: ಆಡಳಿತರೂಢ ಶಿವಸೇನೆಯ ಪ್ರಮಖ ನಾಯಕ ಏಕನಾಥ ಶಿಂಧೆ ಅವರ ಬಂಡಾಯದಿಂದಾಗಿ ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಗೆ ಮಂಗಳ ಹಾಡುವ ಸೂಚನೆಯನ್ನು ಶಿವಸೇನಾ ವಕ್ತಾರ ಹಾಗೂ ಸಂಸದ ಸಂಜಯ್ ರಾವತ್ ನೀಡಿದ್ದಾರೆ. ವಿಧಾನಸಭೆಯನ್ನೇ ವಿಸರ್ಜನೆ ಮಾಡುವಲ್ಲಿಗೆ ರಾಜ್ಯದ ರಾಜಕೀಯ ಪರಿಸ್ಥಿತಿ ತಲುಪಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಬಂಡಾಯ ಶಾಸಕರಿಂದ ಸರ್ಕಾರ ಕಳೆದುಕೊಳ್ಳುವ ಬದಲು, ವಿಧಾನಸಭೆಯನ್ನೇ ವಿಸರ್ಜಿಸಿ ಹೊಸದಾಗಿ ಚುನಾವಣೆ ಹೋಗುವ ಸುಳಿವನ್ನು ನೀಡಿದ್ದಾರೆ.
ತನ್ನ ಜತೆ ಪಕ್ಷದ ಶಾಸಕರು ಹಾಗೂ ಪಕ್ಷೇತರರು ಸೇರಿ ಒಟ್ಟು 46 ಮಂದಿ ಶಾಸಕರು ಇದ್ದಾರೆ ಎಂದು ಏಕನಾಥ ಶಿಂಧೆ ಅವರು ಹೇಳಿಕೊಂಡ ಬೆನ್ನಲ್ಲೇ ರಾವತ್ ಅವರಿಂದ ಈ ಟ್ವೀಟ್ ಬಂದಿದೆ.
ವಿಧಾನಸಭೆಯಲ್ಲಿ ಶಿವಸೇನೆಗೆ ಒಟ್ಟು 55 ಶಾಸಕರ ಬಲ ಇದ್ದು, ಈ ಪೈಕಿ 40 ಶಾಸಕರು ಏಕನಾತ ಶಿಂಧೆ ಅವರ ಜತೆ ಇದ್ದಾರೆ ಎಂದು ಹೇಳಲಾಗಿದೆ. ಅಲ್ಲಿಗೆ ಮೂರನೇ ಎರಡರಷ್ಟು ಮಂದಿ ಶಾಸಕರು ಶಿಂಧೆ ಜತೆ ಇದ್ದಾರೆ ಎಂದರ್ಥ. ನಿಯಮಗಳ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆಯಡಿ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗುವುದಿಲ್ಲ.
ಒಂದು ಪಕ್ಷದ ಮೂರನೇ ಎರಡಷ್ಟು ಶಾಸಕರು ಸಾಮೂಹಿಕವಾಗಿ ಪಕ್ಷಾಂತರ ಮಾಡಿದರೆ ಅಲ್ಲಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಹೀಗಾಗಿ ಸ್ಪೀಕರ್ಗೆ ದೂರು ನೀಡಿ ರೆಬೆಲ್ ಶಾಸಕರನ್ನು ಶಾಸಕ ಸ್ಥಾನದಿಂದ ಉಚ್ಛಾಟಿಸುವ ಆಯ್ಕೆ ಶಿವಸೇನೆಯ ಮುಂದಿಲ್ಲ. ಹೀಗಾಗಿ ವಿಧಾನಸಭೆಯನ್ನೇ ವಿಸರ್ಜನೆ ಮಾಡಿ ಹೊಸದಾಗಿ ಚುನಾವಣೆ ಎದುರಿಸುವ ಯೋಜನೆ ಶಿವಸೇನೆಯದ್ದು. ಆಡಳಿತ ಪಕ್ಷದ ಶಾಸಕರು ತಮ್ಮ ನಾಯಕನ ಮುಖೇನ ವಿಧಾನಸಭೆ ವಿಸರ್ಜನೆ ಮಾಡಲು ರಾಜ್ಯಪಾಲರಿಗೆ ಮನವಿ ನೀಡಿದ್ದೇ ಆದಲ್ಲಿ, ರಾಜ್ಯಪಾಲರು ಅದನ್ನು ಪರಿಗಣಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುತ್ತಾರೆ. ವಿಸರ್ಜನೆ ಮಾಡುವ ನಿರ್ಣಯಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಸರ್ಕಾರ ವಿಸರ್ಜನೆಯಾದಂತೆ. ಆದರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿ ಅವರಿಗೆ ಕೋವಿಡ್ ಪಾಸಿಟಿವ್ ಉಂಟಾಗಿದ್ದು, ವಿಸರ್ಜನೆ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ.