ಮಂಗಳೂರು : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕುರಿತಂತೆ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದು, ಹಿಂದಿನ ಸರಕಾರದ ತಪ್ಪು ನೀತಿಯಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಾಗುತ್ತಿರುವ ಪೆಟ್ರೋಲ್ ಬೆಲೆ ಏರಿಕೆಯ ಹಿಂದೆ ಕೇಂದ್ರ ಸರಕಾರದ ಪಾತ್ರ ಇಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರದ ಕರ್ಮಕಾಂಡದಿಂದಾಗಿ ಬೆಲೆ ಏರಿಕೆಯಾಗಿದೆ. ಹಿಂದಿನ ಸರಕಾರದ ತಪ್ಪು ನೀತಿಯಿಂದಾಗಿ ತೈಲ ಕಂಪನಿಗಳೇ ತಮ್ಮಷ್ಟಕ್ಕೆ ಬೆಲೆ ನಿಗದಿಪಡಿಸುವಂತಾಗಿದೆ ಎಂದು ಹೇಳಿದರು.
ರಷ್ಯಾ-ಯೂಕ್ರೇನ್ ನಡುವಿನ ಯುದ್ಧವು ಕೂಡ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ರಷ್ಯಾದಿಂದ ತೈಲ ಆಮದು ಮಾಡುವ ಕಂಪನಿಗಳಿಗೆ ಯುದ್ಧದಿಂದ ತೊಂದರೆಯಾಗಿದೆ. ಕೇಂದ್ರ ಸರಕಾರ ತೈಲ ಬೆಲೆಯನ್ನು ನಿಯಂತ್ರಣದಲ್ಲಿರಿಸಲು ಕ್ರಮ ಕೈಗೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣವನ್ನು ಮಾಡಲಿದೆ ಎಂದು ಭರವಸೆ ನೀಡಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ (Petrol, diesel) ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಈ ಮೂಲಕ ಕಳೆದ 13 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 8 ರೂ.ಹೆಚ್ಚಳವಾಗಿದೆ.