ಬೆಳ್ತಂಗಡಿ: ಉಜಿರೆಯಲ್ಲಿ ಎಂಟು ವರ್ಷದ ಮಗುವಿನ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ಇನ್ನು ಅಪಹರಣಕ್ಕೆ ಒಳಗಾದ ಬಾಲಕನ ಮನೆಗೆ ಎಸ್ ಪಿ ಲಕ್ಷ್ಮೀಪ್ರಸಾದ್ ಭೇಟಿ ನೀಡಿದ್ದಾರೆ.
ಅಪಹರಣಕ್ಕೆ ಒಳಗಾದ ಬಾಲಕನ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಅಪಹರಣಕಾರರು ಬಿಟ್ ಕಾಯಿನ್ ಯಾಕೆ ಕೇಳುತ್ತಿದ್ದಾರೆ ಎಂಬ ಕುರಿತು ತನಿಖೆ ಮುಂದುವರೆಸಲಾಗಿದೆ. ಆರೋಪಿಗಳು ಮನೆಮಂದಿಯ ಬಗ್ಗೆ ಬಲ್ಲವರೇ ಆಗಿರುವ ಸಾಧ್ಯತೆ ಕುರಿತು ಅನುಮಾನವಿದೆ ಎಂದ್ರು.
ಅಲ್ಲದೇ ಎಸ್.ಪಿ.ಲಕ್ಷ್ಮೀಪ್ರಸಾದ್ ಮನೆ ಮಂದಿಯೊಂದಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದೀರ್ಘ ಮಾತುಕತೆ ನಡೆಸಿ, ಧೈರ್ಯ ಹೇಳಿದರು. ಬಾಲಕ ಅಪಹರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಿದ ಅವರು, ಅಪಹರಣಕಾರರು ಪೋಷಕರೊಂದಿಗೆ ಮೆಸೇಜ್ ನಡೆಸುತ್ತಿರುವ ಕುರಿತು ಮಾಹಿತಿ ಪಡೆದರು.
ಬಂಟ್ವಾಳ ಡಿವೈಎಸ್.ಪಿ ವೆಲೆಂಟೈನ್ ಡಿಸೋಜ, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್ ಹಾಗೂ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.