ಸುಳ್ಯ: ಪ್ರವೀಣ್ ನೆಟ್ಟಾರು ಕಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯದ ಶಿಯಾಬುದ್ದೀನ್ ಅಲಿಯಾಸ್ ಶಿಯಾಬ್(33), ಮಾಡಾವು ಅಂಕತಡ್ಕದ ರಿಯಾಜ್ (27), ಸುಳ್ಯದ ಎಲಿಮಲೆಯ ಬಶೀರ್ (23) ಈ ಮೂವರು ಹಂತಕರನ್ನು ಕರೆ ತಂದು ನಿನ್ನೆ ಬೆಳ್ಳಾರೆಗೆ ಸ್ಥಳ ಮಹಜರು ಕೂಡ ನಡೆಸಿದ್ರು.
ಈ ಮೂವರು ಆರೋಪಿಗಳಲ್ಲಿ ಏನೂ ಅರಿಯದ ಅಮಾಯಕನಂತೆ ಕಾಣುವ ರಿಯಾಜ್ ಅಂಕತಡ್ಕನ ಜನ್ಮ ಜಾತಕ ಕೇಳಿದ್ರೆ ನೀವೆಲ್ಲಾ ಒಮ್ಮೆ ಬೆಚ್ಚಿ ಬೀಳ್ತೀರಾ.ಅಂದ್ಹಾಗೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಸೂತ್ರದಾರನೇ ಈ ರಿಯಾಜ್
ಯಾರಿತ ರಿಯಾಜ್ ಅಂಕತಡ್ಕ:
ರಿಯಾಜ್ ಅಂಕತಡ್ಕ ಪ್ರವೀಣ್ ನೆಟ್ಟಾರು ಅವರ ಮನೆಯಿಂದ ಅಂದಾಜು ನಾಲಕು ಕಿ.ಲೋ. ಮೀಟರ್ ದೂರದಲ್ಲಿರುವ ಅಂಕತಡ್ಕ ನಿವಾಸಿ. ನೋಡೋದಕ್ಕೆ ಪಾಪ ಏನೂ ಗೊತ್ತಿಲ್ಲ ಅಂತಾ ಕಾಣುವ ಇವ ಒಂಥರಾ ಸೈಲೆಂಟ್ ಕಿಲ್ಲರ್. ಇಡೀ ಪ್ರಕರಣಕ್ಕೆ ಈತನೇ ಕೇಂದ್ರ ಬಿಂದು. ಈತ ಪ್ರವೀಣ್ ಚಲನ ವಲನಗಳನ್ನು ಚೆನ್ನಾಗಿ ಬಲ್ಲವನಾಗಿದ್ದ. ಕೃತ್ಯ ನಡೆದ ದಿನ ಉಳಿದ ಇಬ್ಬರು ಹಂತಕರಿಗೆ ಈತನೇ ಮಾರ್ಗ ದರ್ಶಿ ಆಗಿದ್ದ. ರಿಯಾಜ್ ನೆಟ್ಟಾರು, ಮಾಸ್ತಿಕಟ್ಟೆ ಮೂಲಕ ಬೆಳ್ಳಾರೆಗೆ ತೆರಳುವವನಾಗಿದ್ದು, ಮಸೂದ್ ಹತ್ಯೆಯ ಅನಂತರ ಪ್ರವೀಣ್ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದ.ಸೈಲೆಂಟ್ ಆಗಿ ಪ್ರವೀಣ್ ಹತ್ಯೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದ.
ಕೋಳಿ ಕತ್ತರಿಸಿದ ಅನುಭವದಲ್ಲೇ ಪ್ರವೀಣ್ ಉಸಿರು ನಿಲ್ಲಿಸಿದ್ದ ಪಾಪಿ:
ರಿಯಾಜ್ ಗೆ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿದ್ದ ಅನುಭವವಿತ್ತು. ಕೆಲ ಸಮಯ ಅಂಕತಡ್ಕದಲ್ಲಿ ತನ್ನ ಸಂಬಂಧಿಯ ಚಿಕನ್ ಸೆಂಟರ್ನಲ್ಲಿ ಕೋಳಿ ಮಾಂಸ ಮಾಡುವ ಕೆಲಸ ನಿರ್ವಹಿಸಿದ್ದ. ಅನಂತರ ಆಟೋರಿಕ್ಷಾ ಡ್ರೈವರ್ ಕೂಡ ಆಗಿದ್ದ. ಆ ಬಳಿಕ ಲೈನ್ ಸೇಲ್ ಕೆಲಸ ಮಾಡುತ್ತಿದ್ದ. ಹೀಗೆ ಹತ್ತಾರು ಕೆಲಸ ಮಾಡುತ್ತಿದ್ದ. ಹರಿತವಾದ ಆಯುಧದಿಂದ ಕೋಳಿ ಮಾಂಸ ಮಾಡುವುದನ್ನು ಕರಗತ ಮಾಡಿಕೊಂಡಿದ್ದ ರಿಯಾಜ್ ಅದೇ ಧೈರ್ಯದಲ್ಲಿ ಪ್ರವೀಣ್ ಹತ್ಯೆಗೆ ಒಪ್ಪಿಕೊಂಡಿದ್ದ ಅನ್ನೋದು ತನಿಖೆಯ ವೇಳೆ ಬಯಲಾದ ಭಯಾನಕ ಸತ್ಯ. ತೀರಾ ಮೌನಿಯಾಗಿದ್ದ ಈತ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮಾತೂ ಆಡುತ್ತಿರಲಿಲ್ಲ, ಆದರೆ ಮತೀಯವಾದಿ ಸಂಘಟನೆ ಯೊಂದರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಎನ್ನಲಾಗಿದೆ. ಅದರಲ್ಲೂ ಮಸೂದ್ ಹತ್ಯೆಯ ಬಳಿಕ ಇದಕ್ಕೆ ಸೇಡು ತೀರಿಸಿಕೊಳ್ಳಲೇ ಬೇಕೆಂದು ಪ್ರವೀಣ್ ಹತ್ಯೆಯ ಮುಂಚೂಣಿಯಲ್ಲಿದ್ದ.
ತನ್ನ ಸಂಬಂಧಿಯಿಂದ ಪ್ರೇರಿತನಾಗಿದ್ದ ರಿಯಾಜ್
ಬಂಧಿತ ರಿಯಾಜ್ನ ಸಂಬಂಧಿಯೊಬ್ಬ ಕೆಲವು ವರ್ಷಗಳ ಹಿಂದೆ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಕೇರಳದ ಕಣ್ಣೂರಿಗೆ ಕರೆದೊಯ್ದು ಮತಾಂತರ ಮಾಡಲು ಯತ್ನಿಸಿದ್ದ. ಅವರು ತೆರಳುತ್ತಿದ್ದ ದಾರಿಯಲ್ಲಿ ಹಿಂದೂ ಸಂಘಟನೆಯವರು ಕಾರನ್ನು ತಡೆದು ಯುವತಿಯನ್ನು ರಕ್ಷಿಸಿದ್ದರು. ಈತನ ನೆರಳಲ್ಲೇ ರಿಯಾಜ್ ಪಳಗಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದ್ದು, ಈ ಬಗ್ಗೆಯೂ ಪೊಲೀಸ್ ತನಿಖೆ ನಡೆಯುತ್ತಿದೆ.
ಕೊಲೆ ಮಾಡುವ ದಿನ ಮೊಬೈಲ್ ನ್ನು ಮನೆಯಲ್ಲೇ ಇಟ್ಟು ಹೋಗಿದ್ದ ಹಂತಕ
ಕೃತ್ಯ ನಡೆಸುವ ದಿನ ತಾನು ಕೊಲೆ ಮಾಡಿದ್ದೇನೆಂಬ ಸಂದೇಹ ಬರಬಾರದು ಎಂಬ ಕಾರಣಕ್ಕೆ ರಿಯಾಜ್ ತನ್ನ ಮೊಬೈಲ್ ನ್ನು ಮನೆಯಲ್ಲೇ ಇಟ್ಟಿದ್ದ. ತಾನು ಮನೆಯಲ್ಲೇ ಇದ್ದೆ ಎನ್ನುವಂತೆ ಬಿಂಬಿಸುವ ಸಲುವಾಗಿ ಈ ತಂತ್ರ ಹೂಡಿದ್ದ. ಆದರೆ ಪ್ರವೀಣ್ ಹಂತಕರನ್ನು ಶೋಧಿಸುತ್ತಿದ್ದ ಪೊಲೀಸರ ತಂಡಕ್ಕೆ ಕೆಲವು ಆರೋಪಿಗಳ ಬಂಧನದ ಬಳಿಕ ಹತ್ಯೆಯಲ್ಲಿ ರಿಯಾಜ್ ಭಾಗಿಯಾಗಿರುವ ಸುಳಿವು ದೊರೆತಿತ್ತು. ಹೀಗಾಗಿ ಅಂಕತಡ್ಕ ಕೇಂದ್ರಿತವಾಗಿಯೂ ತನಿಖೆ ನಡೆಯುತ್ತಿತ್ತು. ರಿಯಾಜ್ನ ಅಂಕತಡ್ಕ ನಿವಾಸದ ಮೇಲೆ ಕಣ್ಣಿಡಲಾಗಿತ್ತು. ಈತನಿಗೆ ಆಶ್ರಯ ನೀಡಿದ ಕಾರಣಕ್ಕಾಗಿ ಸ್ಥಳೀಯ ಪರಿಸರದ ಒಂದಿಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.
ರಿಯಾಜ್ ಬ್ಯಾಂಕ್ ಖಾತೆಗೆ ಹರಿದು ಬಂದಿತ್ತು ಕಂತೆ ಕಂತೆ ಹಣ:
ರಿಯಾಜ್ ಮನೆಯಲ್ಲಿ ಇರಿಸಿದ್ದ ಮೊಬೈಲ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮೊಬೈಲ್ ಪರಿಶೀಲನೆ ವೇಳೆ ಈತ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಲಭಿಸಿತ್ತು. ಆರೋಪಿಯು ತನ್ನ ಬ್ಯಾಂಕ್ ಖಾತೆಗೆ ಇದೇ ಮೊಬೈಲ್ ನಂಬರ್ ಲಿಂಕ್ ಮಾಡಿದ್ದ. ಕೃತ್ಯ ಎಸಗಿದ ಅನಂತರ ಬೇರೆ ಬೇರೆ ಕಡೆಗಳಿಂದ ಈತನ ಖಾತೆಗೆ ಹಣ ಸಂದಾಯ ಆಗಿರುವುದು ಕೂಡ ಬೆಳಕಿಗೆ ಬಂದಿದೆ. ಮೊಬೈಲ್ಗೆ ಹಣ ಜಮೆಯಾದ ಬಗ್ಗೆ ಸಂದೇಶಗಳು ಬರುತ್ತಿದ್ದವು ಎನ್ನಲಾಗಿದ್ದು, ಈ ಎಲ್ಲ ಅಂಶಗಳು ರಿಯಾಜ್ನ ಕೃತ್ಯವನ್ನು ದೃಢೀಕರಿಸಿವೆ.
ಹತ್ಯೆಗೆ ಅಡಗುತಾಣದಂತಿದ್ದ ಅಂಕತಡ್ಕ
ಪ್ರವೀಣ್ ಮೇಲೆ ದಾಳಿ ನಡೆಸಿದ್ದು ಶಿಹಾಬುದ್ದೀನ್, ರಿಯಾಜ್ ಸಹಾಯಕನಾಗಿದ್ದ. ಹತ್ಯೆಯ ಅನಂತರ ಆರೋಪಿಗಳು ಅಂಕತಡ್ಕದ ರಿಯಾಜ್ ನಿವಾಸಕ್ಕೆ ತೆರಳಿದ್ದರು ಎಂಬ ಅನುಮಾನದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ, ಹತ್ಯೆಯ ದಿನ ಆರೋಪಿಗಳು ಅಂಕತಡ್ಕದ ರಿಯಾಜ್ ನಿವಾಸವನ್ನೇ ಕೇಂದ್ರವಾಗಿಸಿ ಸಂಚು ರೂಪಿಸಿದ್ದರು. ಹತ್ಯೆಯ ಬಳಿಕ ಆರೋಪಿಗಳು ಮಾಸ್ತಿಕಟ್ಟೆ- ಪೆರುವಾಜೆ- ಚೆನ್ನಾವರ-ಪಾಲ್ತಾಡಿ-ಅಂಕತಡ್ಕ ಅಥವಾ ಮಾಸ್ತಿಕಟ್ಟೆ-ಪೆರುವಾಜೆ-ಮುಕ್ಕೂರು-ಬಂಬಿಲ ಮಾರ್ಗವಾಗಿ ಅಂಕತಡ್ಕಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ಸಂಚರಿಸಿರಬಹುದೇ ಎಂಬ ಅನುಮಾನ ಇದೆ. ಮಾಸ್ತಿಕಟ್ಟೆ-ನೆಟ್ಟಾರು-ಅಂಕತಡ್ಕ ಪ್ರಮುಖ ಸಂಪರ್ಕ ರಸ್ತೆ ಆಗಿದ್ದು, ಇಲ್ಲಿಂದ ತೆರಳಿದರೆ ಸಿಕ್ಕಿ ಬೀಳಬಹುದು ಎಂಬ ಕಾರಣದಿಂದ ಒಳ ರಸ್ತೆಯನ್ನೇ ಆಶ್ರಯಿಸಿರಬಹುದು ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.