ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಯ ನಾವೂರು ನಿವಾಸಿ ಯಾಕೂಬ್ ಅವರ ಪುತ್ರ ಅಬೀದ್ ಹಾಗೂ ಬೆಳ್ಳಾರೆ ಗೌರಿಹೊಳೆ ಟಿ.ಎ. ಮಹಮ್ಮದ್ ಅವರ ಪುತ್ರ ನೌಫಾಲ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಸುಳ್ಯ ಎಸ್ ಡಿ ಪಿ ಐ ಕಚೇರಿಗೆ ಆರೋಪಿಗಳನ್ನು ಕರೆ ತಂದು ಸ್ಥಳ ಮಹಜರು ನಡೆಸಿದ್ದಾರೆ. ಇದರ ಬೆನ್ನಲ್ಲೇ ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಸ್ಫೋಟಕ ಮಾಹಿತಿಗಳು ಹೊರ ಬಿದ್ದಿದೆ.
ಪ್ರಕರಣದಲ್ಲಿ ಅಬೀದ್ ಪಾತ್ರವೇನು?:
ಸುಳ್ಯದ ನಾವೂರು ನಿವಾಸಿಯಾಗಿದ್ದ ಅಬೀದ್ ಎಸ್ ಡಿ ಪಿ ಐನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಮಸೂದ್ ಕೊಲೆಯಾಗುತ್ತಿದ್ದಂತೆ ಬಂಧಿತ ಆರೋಪಿಗಳೆಲ್ಲಾ ಸೇರಿ ಸುಳ್ಯದ ಎಸ್ ಡಿ ಪಿ ಐ ಕಚೇರಿಯಲ್ಲಿ ಕುಳಿತು ಕೊಲೆಗೆ ಪ್ಲ್ಯಾನ್ ರೂಪಿಸಿದ್ದರು ಎನ್ನಲಾಗಿದೆ. ಅಬೀದ್, ಹಂತಕರು ಕೊಲೆ ಮಾಡಿ ಪರಾರಿಯಾಗಲು ತನ್ನ ಬಳಿ ಇದ್ದ ಕೇರಳ ರಿಜಿಸ್ಟ್ರೇಷನ್ ಬೈಕ್ ನ್ನು ನೀಡಿದ್ದ. ಇದೇ ಬೈಕ್ ನಲ್ಲಿ ಬಂದು ಕೊಲೆ ಮಾಡಿ ಮೂವರು ಹಂತಕರು ಎಸ್ಕೇಪ್ ಆಗಿದ್ದರು. ಈತ ಹಂತಕರೊಂದಿಗೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಹಂತಕರಿಗೆ ಪ್ರವೀಣ್ ಚಲನವಲನದ ಕ್ಷಣ ಕ್ಷಣದ ಮಾಹಿತಿ ನೀಡಿದ್ದ ನೌಫಲ್
ಇನ್ನು ಬೆಳ್ಳಾರೆಯ ಗೌರಿ ಹೊಳೆ ನಿವಾಸಿಯಾಗಿದ್ದ ನೌಫಲ್ ಕೂಡ ಎಸ್ ಡಿ ಪಿ ಐನಲ್ಲಿದ್ದ. ಹಂತಕರ ಜೊತೆ ನೇರ ಸಂಪರ್ಕದಲ್ಲಿದ್ದ ನೌಫಲ್ ಪ್ರವೀಣ್ ಓಡಾಟದ ಬಗ್ಗೆ ಕ್ಷಣ ಕ್ಷಣದ ಅಪ್ಡೇಟ್ ನ್ನು ಹಂತಕರಿಗೆ ನೀಡುತ್ತಿದ್ದ. ಅಂದ್ಹಾಗೆ ಪ್ರವೀಣ್ ಕೊಲೆ ಮಾಡಲು ಎರಡು ಬಾರಿ ವಿಫಲರಾಗಿ ಮೂರನೇ ಬಾರಿಗೆ ಹಂತಕರು ಯಶಸ್ವಿಯಾಗಿದ್ದರು. ಜು.23 ಮತ್ತು ಜು.24 ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.23 ರಂದು ಅಬೀದ್ ನೀಡಿದ ಬೈಕ್ ನಲ್ಲಿ ಕೊಲ್ಲಲು ಹಂತಕರ ತಂಡ ಬಂದಿತ್ತು. ಆದ್ರೆ ಪ್ರವೀಣ್ ಅಂಗಡಿ ಬಳಿ ಜನ ಇದ್ದಿದ್ರಿಂದ ವಾಪಾಸ್ ತೆರಳಿದ್ದರು. ಬಳಿಕ ಜು.24 ರಂದು ಸಂಜೆ 4.30 ಕ್ಕೆ ಕೊಲ್ಲಲು ಮತ್ತೆ ಸಂಚು ರೂಪಿಸಿದ್ದರು. ಅಂದು ಮೂವರು ಹಂತಕರ ತಂಡದಲ್ಲಿ ಅಬೀದ್ ಕೂಡ ಬಂದಿದ್ದ. ಈ ವೇಳೆ ಪ್ರವೀಣ್ ಅಂಗಡಿಯಲ್ಲಿ ಇದ್ದಾರಾ ಇಲ್ವಾ ಎಂದು ನೋಡಿಕೊಂಡು ಬಂದು ನೌಫಾಲ್ ಹಂತಕರಿಗೆ ಪ್ರವೀಣ್ ಇಲ್ಲ ಎಂಬ ಮಾಹಿತಿ ನೀಡಿದ್ದ. ಪ್ರವೀಣ್ ಇಲ್ಲದ ಕಾರಣ ಅಂದೂ ಕೂಡ ಹಂತಕರ ಪ್ಲ್ಯಾನ್ ಕೈಕೊಟ್ಟಿತ್ತು.
ಆದರೆ ಜುಲೈ 26 ರಂದು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದ ಹಂತಕರು ಪ್ರವೀಣ್ ಉಸಿರು ನಿಲ್ಲಿಸಿದ್ದರು. ಈ ಎಲ್ಲಾ ವಿಚಾರಗಳನ್ನು ನೌಫಾಲ್ ಹಾಗೂ ಅಬೀದ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಹತ್ಯೆಗೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇನ್ನೂ ಸ್ಥಳೀಯ ಕೆಲವು ಯುವಕರು ಇವರ ಜೊತೆ ಕೈಜೋಡಿಸಿರುವ ಸುಳಿವು ಪೊಲೀಸರಿಗೆ ದೊರೆತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.