ಸುಳ್ಯ: ಇವತ್ತು ಕಾಲ ಹೇಗಾಗಿದೆ ಅಂದ್ರೆ ಹೊಸ ಮನೆ ಕಟ್ಟುವವರೆಲ್ಲಾ ಆರ್ ಸಿಸಿ ಮನೆಗಳನ್ನೇ ಕಟ್ಟೋದು ಅನ್ನೋ ಹಾಗಾಗಿದೆ. ಅದು ಅನಿವಾರ್ಯ ಅಂತಾ ಕೂಡ ಅನ್ನಬಹುದು. ಮರಗಳ ಅಲಭ್ಯತೆಗಳೂ ಕೂಡ ಇದಕ್ಕೊಂದು ಕಾರಣ ಅಂದ್ರೆ ತಪ್ಪಾಗಲಾರದು. ಮನುಷ್ಯನ ಸ್ವಾರ್ಥದಿಂದಾಗಿ ಕಾಡು ನಾಶವಾಗಿ ಅಲ್ಲೋ ಇಲ್ಲೋ ಮಾತ್ರ ಕಾಣ ಸಿಗುವಂತಾಗಿದೆ. ಇದರ ಬಿಸಿ ಮನುಷ್ಯನಿಗಿಂತ ಹೆಚ್ಚಾಗಿ ತಟ್ಟುತ್ತಿರುವುದು ಪ್ರಾಣಿ ಪಕ್ಷಿಗಳಿಗೆ.
ಹೌದು… ಇದಕ್ಕೊಂದು ಜ್ವಲಂತ ಸಾಕ್ಷಿ ಈ ಸುದ್ದಿ. ಸುಳ್ಯದ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಬೆಳೆಸಿದ ಒಂದು ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿತ್ತು. ಮರದ ಗೆಲ್ಲನ್ನು ತೆರವುಗೊಳಿಸಲು ಮುಂದಾದಾಗ ಈ ಕೊಂಬೆಯಲ್ಲಿ ಎರಡು ಕಾಗೆಯ ಗೂಡುಗಳು ಪತ್ತೆಯಾಗಿವೆ.
ಒಂದು ಗೂಡಿನಲ್ಲಿ ಕಾಗೆಗಳು ವಾಸವಿದ್ದರ, ಇನ್ನೊಂದು ಗೂಡಿನಲ್ಲಿದ್ದ ಕಾಗೆಗಳು ಹಾರಿ ಹೋಗಿದ್ದವು. ಈ ಗೂಡುಗಳನ್ನು ನೋಡಿದವರು ಅರೆ ಕ್ಷಣ ದಂಗಾಗಿ ಹೋಗಿದ್ದರು. ಈ ಕಾಗೆಯ ಗೂಡುಗಳು ಸುಮಾರು ಎರಡು ಕೆಜಿಯಷ್ಟು ಸಣ್ಣಸಣ್ಣ ಕಬ್ಬಿಣದ ತಂತಿಗಳಿಂದಲೇ ಸಂಪೂರ್ಣವಾಗಿ ನಿರ್ಮಾಣವಾಗಿದ್ದವು. ಸರಿಯಾದ ಕಡ್ಡಿಗಳು ಸಿಗದೇ ವಿಧಿಯಿಲ್ಲದೇ ಕಾಗೆಗಳು ಕಬ್ಬಿಣದ ತಂತಿಗಳಿಂದಲೇ ಗೂಡು ಕಟ್ಟಿಕೊಂಡಿದ್ದವು. ಪದೇ ಪದೇ ಯಾರೂ ಗುರು ಗೂಡು ಕಟ್ಟೋದು ಇದು ಟೆಶ್ಶನ್ ಇಲ್ಲ ಅನ್ನೋ ರೀತಿ ಕಾಗೆಗಳು ಕೂಡ ಆಧುನಿಕತೆಗೆ ಮಾರು ಹೋಗಿವೆ. ಆದರೆ ತಮಾಷೆಯ ಹೊರತಾಗಿ ಯೋಚಿಸಿ ನೋಡಿದರೆ ಮನುಷ್ಯ ಮಾಡುವ ತಪ್ಪಿನಿಂದ ಪ್ರಾಣಿ ಪಕ್ಷಿಗಳು ಎಷ್ಟು ತೊಂದರೆ ಅನುಭವಿಸುತ್ತಿವೆ ಅನ್ನೋದು ಅರ್ಥವಾಗುತ್ತೆ.
ಸದ್ಯ ಖಾಲಿ ಕಾಗೆ ಗೂಡನ್ನು ಸತ್ಯಸಾಯಿ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.