ಬೆಂಗಳೂರು: ಕರಾವಳಿ ಭಾಗದಲ್ಲಿ ಉಳುಮೆ ಮಾಡುತ್ತಿರುವ ರೈತರ ಗೋಮಾಳ, ಗಾಯರಾಣ, ಸೊಪ್ಪಿನ ಬೆಟ್ಟ, ಕುಮ್ಕಿ ಜಮೀನು ಸಕ್ರಮಕ್ಕೆ ರಾಜ್ಯ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಇಂದು ಪ್ರಶ್ನೋತ್ತರ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ಕಂದಾಯ ಸಚಿವ ಅಶೋಕ್ ಈ ಉತ್ತರ ನೀಡಿದ್ದಾರೆ.
ಬಹಳ ಕಾಲದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ರೈತರು ಕುಮ್ಕಿ ಜಮೀನು ಸಕ್ರಮ ಆಗದೇ ಕಾಯುತ್ತಿದ್ದಾರೆ, ಕುಮ್ಕಿ ಜಮೀನು ಸಕ್ರಮಕ್ಕೆ ಕಾನೂನು ನಿಯಮಾವಳಿ ರೂಪಿಸಲು ವಿಳಂಬ ಆಗುತ್ತಿದೆ ಎಂದು ಪ್ರತಾಪ ಸಿಂಹ ನಾಯಕ್ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಕರಾವಳಿ ಭಾಗದಲ್ಲಿ ಕುಮ್ಕಿ, ಬಾಣೆ, ಕಾನ ಭೂಮಿ ಉಳುಮೆ ಮಾಡುತ್ತಿದ್ದಾರೆ, ಹಿಂದಿನ ಯಾವ ಸರ್ಕಾರಗಳೂ ಇದಕ್ಕೆ ಸಂಬಂಧಿಸಿ ಪ್ರಯತ್ನ ಮಾಡಿರಲಿಲ್ಲ, ಸಚಿವ ಸಂಪುಟ ಉಪ ಸಮಿತಿ ರಚನೆ ಆಗಿದೆ, ಸಿಎಂ ಹಾಗೂ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಉತ್ತರ ನೀಡಿದ್ದಾರೆ.