ಉಪ್ಪಿನಂಗಡಿ: ಇಲ್ಲಿನ ತುಂಬಿದ ನೇತ್ರಾವತಿ ನದಿಯಲ್ಲಿ ಜು.26ರಂದು ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡವು ದೋಣಿಯ ಮೂಲಕ ನದಿ ಮಧ್ಯಕ್ಕೆ ಹೋಗಿ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಘಟನೆಯ ವಿವರ: ನದಿಯ ನೀರಿನ ಮಟ್ಟವು ನಿನ್ನೆಗಿಂತಲೂ ಇಂದಿನ ದಿನ ಏರಿಕೆಯಾಗಿದ್ದು, 28.25 ಮೀ. ಎತ್ತರದಲ್ಲಿ ಹರಿಯುತ್ತಿತ್ತು. ನದಿಯ ಮಧ್ಯದಲ್ಲಿ ದನವೊಂದು ತೇಲಿಕೊಂಡು ಹೋಗುತ್ತಿರುವುದನ್ನು ಹಳೆಗೇಟು ಬಳಿಯ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕ ಚಂದಪ್ಪ ಅವರು ನೋಡಿದ್ದು, ಕೂಡಲೇ ದನವು ನದಿಯಲ್ಲಿ ತೇಲಿ ಬರುತ್ತಿದ್ದ ಮಾಹಿತಿಯನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಬೀಡು ಬಿಟ್ಟಿರುವ ಪ್ರವಾಹ ರಕ್ಷಣಾ ತಂಡಕ್ಕೆ ನೀಡಿದರು. ತಕ್ಷಣವೇ ಕಾರ್ಯಪ್ರವೃತವಾದ ಈ ತಂಡ ತಮ್ಮಲ್ಲಿರುವ ರಬ್ಬರ್ ದೋಣಿಯ ಮೂಲಕ ಉಪ್ಪಿನಂಗಡಿ ಬಳಿಯ ನೇತ್ರಾವತಿ ನದಿ ಸೇತುವೆಯ ಬಳಿ ತೆರಳುತ್ತಿರುವಾಗ ಎದುರಿನಿಂದ ನದಿಯ ಮಧ್ಯ ಭಾಗದಲ್ಲಿ ದನವು ನೀರಿನಲ್ಲಿ ಕೊಚ್ಚಿಕೊಂಡು ಬರುವುದನ್ನು ಕಂಡು ಅಲ್ಲಿಯೇ ಕಾರ್ಯಾಚರಣೆ ನಡೆಸಿ, ದನದ ಮೂಗುದಾರಕ್ಕೆ ಹಗ್ಗವನ್ನು ಕಟ್ಟಿ ದೇವಾಲಯದ ಬಳಿ ದಡಕ್ಕೆ ತಂದು ಅದನ್ನಲ್ಲಿ ಕಟ್ಟಿ ಹಾಕಿದರು.
ಘಟನೆಯ ಕುರಿತು ಸಾರ್ವಜನಿಕರು ಪ್ರಶಂಶೆಯನ್ನು ವ್ಯಕ್ತಪಡಿಸಿದ್ದು, ಜಾನುವಾರುಗಳನ್ನು ರಭಸದಿಂದ ಹರಿಯುವ ನದಿ ನೀರಿನಲ್ಲಿ ರಕ್ಷಿಸುವುದು ಸುಲಭವಲ್ಲ. ಅವುಗಳ ರಕ್ಷಣೆಗೆ ಹಿಡಿಯಲು ಪ್ರಯತ್ನಿಸಿದಾಗ ಅವುಗಳು ಹೆದರಿ ಆ ಕಡೆ, ಈಕಡೆ ಹಾರಲು, ಹೊರಳಾಡಲು ನೋಡುತ್ತವೆ. ಇದರಿಂದ ದೋಣಿಯೇ ಮಗುಚುವ ಸಂಭವವಿದೆ. ಆದರೂ ಇಂತಹ ಅಪಾಯದ ಪರಿಸ್ಥಿತಿಯಲ್ಲಿ ನದಿ ಮಧ್ಯದಿಂದ ದನವನ್ನು ರಕ್ಷಿಸಿ ತಂದ ಪ್ರವಾಹ ರಕ್ಷಣಾ ತಂಡವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಕಾರ್ಯಾಚರಣೆಯಲ್ಲಿ ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ, ಚರಣ್, ಸುದರ್ಶನ್, ಹಾರೀಸ್, ಸಮದ್ ಇದ್ದರು.