ಬಂಟ್ವಾಳ:ಅಖಿಲ ಭಾರತೀಯ ಅಧಿವಕ್ತ ಪರಿಷತ್, ಬಂಟ್ವಾಳ ಘಟಕದ ವತಿಯಿಂದ ಇಂದು ಮಧ್ಯಾಹ್ನ 12.30 ಕ್ಕೆ ತಹಶೀಲ್ದಾರ್ ಬಂಟ್ವಾಳ ಇವರಿಗೆ ತಹಶೀಲ್ದಾರರ ಕಚೇರಿ ಬಂಟ್ವಾಳದ ಅವ್ಯವಸ್ಥೆಗಳನ್ನು ಶೀಘ್ರವಾಗಿ ಸರಿಪಡಿಸಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಪ್ರಸಾದ್ ಕುಮಾರ್ ರೈ ಯವರು ತಹಶೀಲ್ದಾರರವರಿಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್, ಬಂಟ್ವಾಳದ ಉಪಾಧ್ಯಕ್ಷರು ಯಶವಂತ ವಿಟ್ಲ, ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಪ್ರಭು, ವಕೀಲರಾದ ವೀರೇಂದ್ರ ಎಂ ಸಿದ್ದಕಟ್ಟೆ, ವಿನೋದ್, ಶ್ರೀಕೃಷ್ಣ, ಗಂಗಾಧರ ನಾಯಕ್ ಉಪಸ್ಥಿತರಿದ್ದರು.
ಈ ಬಗ್ಗೆ ತಹಶೀಲ್ದಾರ್ ಅರ್ಚನಾ ಭಟ್ ಸಾರ್ವಜನಿಕರಿಗೆ ಅನುಕೂಲವಾಗುವ ಮತ್ತು ಜನಸಾಮಾನ್ಯರಿಗೆ ಅಧಿಕಾರಿಗಳು ಸ್ಪಂದನೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಬಂಟ್ವಾಳ ತಹಶೀಲ್ದಾರರವರ ಗಮನಕ್ಕೆ ತಂದ ಮುಖ್ಯ ಸಮಸ್ಯೆಗಳು
1. ಬಂಟ್ವಾಳ ತಾಲೂಕು ಕಚೇರಿಯ ಅಭಿಲೇಖಾಲಯದ ಅವ್ಯವಸ್ಥೆಯನ್ನು ಸರಿಪಡಿಸಬೇಕು
2. ಸಾರ್ವಜನಿಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಆಪೇಕ್ಷಿತ ನಕ್ಷೆಯ ಮುಖಾoತರ ಭೂ ಪರಿವರ್ತನೆಗೆ ಅವಕಾಶ ಮಾಡಿಕೊಡಬೇಕು.
3. ಚಿಕ್ಕ ಪುಟ್ಟ ಸಮಸ್ಯೆಗಳ ವಿಲೇವಾರಿಗೆ ತಿಂಗಳಿಗೊಂದು ರೆವೆನ್ಯೂ ಅದಾಲತ್ ಗಳನ್ನ ನಡೆಸಿ ಸ್ಥಳದಲ್ಲೇ ಪರಿಹಾರ ನೀಡಬೇಕು
4. ಅಕ್ರಮ ಸಕ್ರಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈ ಗೊಳ್ಳಬೇಕು
5. ನಮೂನೆ 9 ಮತ್ತು 11 ಆದ ಬಗ್ಗೆ ಪಹಣಿಯಲ್ಲಿ ನಮೂದು ಮಾಡಿ ಅಕ್ರಮಗಳ ತಡೆಗೆ ಸೂಕ್ತ ಕ್ರಮ ಕೈ ಗೊಳ್ಳಬೇಕು
6. ತಾಲೂಕು ಕಚೇರಿಯಲ್ಲಿ ಕಡತಗಳ ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈ ಗೊಳ್ಳಬೇಕು
7. ಪ್ರತಿ ಗ್ರಾಮಕ್ಕೊಂದು ಗ್ರಾಮಕಾರಣಿಕರನ್ನು ನೇಮಕ ಮಾಡಲು ಕ್ರಮ ಕೈ ಗೊಂಡು ಸಾರ್ವಜನಿಕರು ತಮ್ಮ ಕೆಲಸಗಳಿಗೆ ಅಲೆದಾಡುವುದನ್ನು ತಪ್ಪಿಸುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು
8. ಕೋರ್ಟ್ ಡಿಕ್ರಿಯ ಆಧಾರದಲ್ಲಿ ಪಹಣಿಯಲ್ಲಿ ಹಕ್ಕುದಾರರ ಹೆಸರನ್ನು ನಮೂದು ಮಾಡಲು ಇರುವ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ ಕೈ ಗೊಳ್ಳಬೇಕು