ಮಂಗಳೂರು: ಉನ್ನತ ಹುದ್ದೆ ನೀಡುವ ಅಸೆ ತೋರಿಸಿ ಹಣಪಡೆದು ವಂಚನೆ ಮಾಡಿರುವ ಆರೋಪದಡಿ ನ್ಯಾಯಾಂಗ ಬಂಧನದಲ್ಲಿದ್ದ ಹಿಂದೂ ಸಂಘಟನೆಯ ಮುಖಂಡ ಪ್ರಸಾದ್ ಅತ್ತಾವರ್ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವಿವಿ ಪ್ರಾಧ್ಯಾಪಕ ಡಾ| ಎಂ. ಜಯಶಂಕರ್ಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ, ಅವರಿಂದ ಸುಮಾರು ರೂ.17 ಲಕ್ಷವನ್ನು ಪಡೆದುಕೊಂಡು, ಕುಲಪತಿ ಹುದ್ದೆಯನ್ನು ಕೊಡಿಸದೆ ಮೋಸ ಮಾಡಿದ್ದಾರೆ ಎಂಬುವುದು ಪ್ರಸಾದ್ ಅತ್ತಾವರ್ ವಿರುದ್ಧ ಇರುವ ಆರೋಪ. ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಸಾದ್ ಅತ್ತಾವರ್ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಪ್ರಸಾದ್ ತನ್ನ ವಕೀಲರಾದ ಮಯೂರ ಕೀರ್ತಿ ಮೂಲಕ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಒಬ್ಬ ಸರ್ಕಾರಿ ಪ್ರಾಧ್ಯಾಪಕರು ಕುಲಪತಿ ಹುದ್ದೆಗೆ ಲಂಚ ಕೊಡುವುದೆಂದರೆ ಅವರು ಕೂಡಾ ಅಪರಾಧ ಎಸಗಿದಂತೆ ಆಗಿದ್ದು, ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರಸಾದ್ ಪರ ನ್ಯಾಯಾಲಯದಲ್ಲಿ ವಾದಿಸಲಾಗಿತ್ತು.
ವಾದ-ವಿವಾದಗಳನ್ನು ಆಲಿಸಿದ ಮಂಗಳೂರಿನ 7ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಪದ್ಮ ಎಂ ಅವರು, ಅತ್ತಾವರ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.