ಬೆಳ್ತಂಗಡಿ: ತಾಲೂಕಿಗೆ ಹೆಚ್ಚುವರಿ ತುರ್ತು ಅಗ್ನಿಶಾಮಕ ಠಾಣೆ ಮಂಜೂರು ಮಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರ ಬರೆದಿದ್ದಾರೆ.
ಬೆಳ್ತಂಗಡಿ ತಾಲೂಕು ಧಾರ್ಮಿಕ, ಸಾಂಸ್ಕೃತಿಕ, ಹಾಗೂ ವ್ಯಾಪಾರ-ವಹಿವಾಟಿನಲ್ಲಿ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಐತಿಹಾಸಿಕ ಧರ್ಮಸ್ಥಳ ಕ್ಷೇತ್ರದಲ್ಲಿ ದಿನಾಲೂ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಲೇ ಇರುತ್ತಾರೆ. ಸಾವಿರಾರು ಅಂಗಡಿ-ಮುಗ್ಗಟ್ಟುಗಳು ಸೇರಿದಂತೆ ಅನೇಕ ವ್ಯಾಪಾರ ಸ್ಥಳವಾಗಿದೆ. ತಾಲೂಕಿನಲ್ಲಿ ಒಟ್ಟು ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಿದೆ. ಬೆಳ್ತಂಗಡಿ ತಾಲೂಕಿನ ಒಟ್ಟಾರೆ ಚಟುವಟಿಕೆಗಳನ್ನ ಗಮನೀಕರಿಸಿ ಹೆಚ್ಚುವರಿಯಾಗಿ ಇನ್ನೊಂದು ಅಗ್ನಿ ಶಾಮಕ ಠಾಣೆಯನ್ನು ಮಂಜೂರು ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಆಗಸ್ಟ್ 31 ರಂದು ಬೆಳ್ತಂಗಡಿಯ ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಸಮೀಪದ ಮೂರು ಅಂಗಡಿಗಳು ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇಂತಹ ದುರ್ಘಟನೆಗಳು ನಡೆಯುತ್ತಲೇ ಇದೆ. ಕೇವಲ ಒಂದು ಅಗ್ನಿಶಾಮಕ ಠಾಣೆ ಇರುವ ಕಾರಣ ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ ಇಡೀ ಅಂಗಡಿಯಲ್ಲಿ ಅನಾಹುತವೇ ಸಂಭವಿಸಿ ಹೋಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ಕೂಡಲೇ ತಾಲೂಕಿನಲ್ಲಿ ಹೆಚ್ಚುವರಿ ಅಗ್ನಿ ಶಾಮಕ ಠಾಣೆ ಮಂಜೂರು ಮಾಡುವುದೊಂದೆ ತಾತ್ಕಾಲಿಕ ಪರಿಹಾರ ಎಂದಿದ್ದಾರೆ.