Thursday, June 4, 2026
Homeಕರಾವಳಿಮಂಗಳೂರುಬಿಜೆಪಿಗರ ಅಕ್ರಮ , ಅನಧಿಕೃತ ದಂಧೆಗಳಿಗೆ ಕಡಿವಾಣ ಬೀಳುವ ಭಯದಿಂದ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು...

ಬಿಜೆಪಿಗರ ಅಕ್ರಮ , ಅನಧಿಕೃತ ದಂಧೆಗಳಿಗೆ ಕಡಿವಾಣ ಬೀಳುವ ಭಯದಿಂದ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರೋಧಿಸುತ್ತಿದ್ದಾರೆ: ರಕ್ಷಿತ್ ಶಿವರಾಂ

- Advertisement -
- Advertisement -

ಬೆಳ್ತಂಗಡಿ: ಪೋಲಿಸ್ ಇಲಾಖೆಯಲ್ಲಿ ಜನಸಾಮಾನ್ಯರಿಗೆ ತ್ವರಿತವಾಗಿ ನ್ಯಾಯ ಸಿಗುವಂತಾಗಲು ಮತ್ತು ಪೋಲಿಸ್ ಇಲಾಖೆಯ ವಿಸ್ತರಣೆಯ ಭಾಗವಾಗಿ ರಾಜ್ಯ ಸರ್ಕಾರ ಬೆಳ್ತಂಗಡಿ ಪೋಲಿಸ್ ಉಪ ವಿಭಾಗ ಮಂಜೂರುಗೊಳಿಸಿದ್ದು , ಅದನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಲು ಬಿಡುವುದಿಲ್ಲ. ಬಿಜೆಪಿಗರ ಅಕ್ರಮ , ಅನಧಿಕೃತ ದಂಧೆಗಳಿಗೆ ಕಡಿವಾಣ ಬೀಳುವ ಭಯದಿಂದ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿಗರು ವಿರೋಧಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತಾ ಶಿವರಾಂ ಹೇಳಿದ್ದಾರೆ.

ಪೋಲಿಸ್ ಇಲಾಖೆಯ ಬಲವರ್ಧನೆ ಮತ್ತು ವಿಸ್ತರಣೆಯ ಭಾಗವಾಗಿ ರಾಜ್ಯ ಸರ್ಕಾರ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು ಇತ್ತೀಚಿಗೆ ಮಂಜೂರುಗೊಳಿಸಿ , ನೂತನ ಡಿವೈಎಸ್ಪಿ ನೇಮಿಸಿದ್ದಾರೆ. ಇದನ್ನು ಸಹಿಸದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿಗರು ವಿರೋಧಿಸಿ , ಪೋಲಿಸ್ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಅಪನಂಬಿಕೆ ಉಂಟುಮಾಡಲು ಸುಳ್ಳು ಅಪಪ್ರಚಾರದಲ್ಲಿ ತೊಡಗಿರುವುದು ಅತ್ಯಂತ ಖಂಡನೀಯ.

ಪೋಲಿಸ್ ಇಲಾಖೆಯಿಂದ ಜನರು ಇನ್ನಷ್ಟು ಸಂಕಷ್ಟ ಎದುರಿಸುತ್ತಾರೆ , ಪೋಲಿಸರು ಜನರನ್ನು ಸುಲಿಗೆ ಮಾಡುತ್ತಾರೆ ಎಂದು ಸುಳ್ಳು ಅಪಪ್ರಚಾರ ನಡೆಸುತ್ತಿರುವ ಶಾಸಕರ ನಡೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ. ಮನೆ ಮನೆಗೆ ಪೋಲಿಸ್ , ಜನಸ್ನೇಹಿ ಪೋಲಿಸ್ ಮೂಲಕ ಜನಸಾಮಾನ್ಯರ ನಡುವೆ ಬೆರೆಯುತ್ತಿರುವ ಪೋಲಿಸ್ ಇಲಾಖೆಯ ಬಗ್ಗೆ ಗೊಂದಲ ಸೃಷ್ಟಿಸುವ ಮೂಲಕ ತಾಲೂಕಿನಲ್ಲಿ ಅರಾಜಕತೆ ಉಂಟು ಮಾಡುತ್ತಿರುವುದು ದುರಂತ. ಓರ್ವ ಶಾಸಕನಾಗಿ , ವಕೀಲನಾಗಿ ಪೋಲಿಸ್ ಇಲಾಖೆಯ ಕಾರ್ಯವೈಖರಿ , ಕಾರ್ಯಚಟುವಟಿಕೆಗಳ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲದಿರುವುದು ದುರಂತ. ಈ ಹಿಂದೆ ಅಕ್ರಮ ಗಣಿಗಾರಿಕೆ ಮಾಡುವವರ ಪರ ಮಧ್ಯರಾತ್ರಿ ಠಾಣೆಗೆ ನುಗ್ಗಿ ದಾಂದಲೆ ಮಾಡಿದವರು ಇವರೆಲ್ಲವೇ. ಇದಕ್ಕೆಲ್ಲ ಇನ್ನು ಮುಂದೆ ಕಡಿವಾಣ ಬೀಳಬಹುದು ಎಂಬ ಭಯ ಅವರಿಗಿರಬಹುದು.


ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ಬಗ್ಗೆ ಕೇಸ್ ದಾಖಲಿಸುವುದು , ದಂಡ ವಿಧಿಸುವುದು ಇಡೀ ದೇಶದಾದ್ಯಂತ ಜಾರಿಯಲ್ಲಿದೆ. ಆದರೂ ರಾಜಕೀಯ ಮಾಡುವ ಉದ್ದೇಶದಿಂದ ಕೇವಲ ಕರ್ನಾಟಕ ಪೋಲಿಸರು ಮಾತ್ರ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಸವಾರರ ಮೇಲೆ ಕೇಸ್ ದಾಖಲಿಸುತ್ತಾರೆ ಎಂಬ ಬಾಲಿಷತನದ ಹೇಳಿಕೆ ನೀಡುವ ಶಾಸಕ ಹರೀಶ್ ಪೂಂಜಾರವರೇ , ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ಸನ್ಮಾನ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಬೇಕು.. ಮತ್ತು ಇಂತಹ ಅಸಂಬದ್ಧ ಹೇಳಿಕೆ ನೀಡಿ ಪೋಲಿಸರ ಆತ್ಮಸ್ಥೈರ್ಯ ಕುಗ್ಗಿಸುವ ಷಡ್ಯಂತ್ರ ಇದು ಎಂದಿದ್ದಾರೆ.

- Advertisement -

Latest News

error: Content is protected !!