ಮಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ, ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. 2022ನೇ ಸಾಲಿನ ಮೊದಲ ಮಳೆ ಮಂಗಳೂರು ನಗರದಲ್ಲಿ ಅವಂತಾರವನ್ನು ಉಂಟು ಮಾಡಿದೆ.
ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಅಕಾಲಿಕ ಮಳೆಗೆ ಗಿಫ್ಟ್ ಸೆಂಟರ್ ಒಳಗೆ ಮಳೆ ನೀರು ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ. ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಅಕಾಲಿಕ ಮಳೆಯಿಂದಾಗಿ ಹಂಪನಕಟ್ಟೆ ಬಳಿಯ ಅಂಗಡಿಗಳಿಗೆ ನೀರು ನುಗ್ಗಿದ್ದು, ಗಿಫ್ಟ್ ಸೆಂಟರ್ ಒಂದರಲ್ಲಿದ್ದ ವಸ್ತುಗಳು ನೀರಿನಲ್ಲಿ ಮುಳುಗಿವೆ.
ನಗರದಲ್ಲಿನ ಅವೈಜ್ಞಾನಿಕ ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ ಎಂದು ಆರೋಪಿಸಲಾಗಿದೆ. ಬೆಳಿಗ್ಗೆ ನಗರದಲ್ಲಿ ಸುರಿದ ಅಕಾಲಿಕ ಮಳೆಯಿಂದ ರಸ್ತೆಯ ನೀರು ಅಂಗಡಿಯೊಳಗೆ ನುಗ್ಗಿದೆ. ಗಲ್ಲಿಟ್ರಾಪ್ ಮೂಲಕ ಚರಂಡಿಗೆ ಸೇರಬೇಕಾಗಿದ್ದ ಮಳೆ ನೀರು ಅಂಗಡಿಗೆ ನುಗ್ಗಿದ್ದು, ಕಾಮಗಾರಿ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.