ಮಂಗಳೂರು: ಮಳೆಯಿಂದಾಗಿ ಗುರುಪುರ ವಜ್ರದೇಹಿ ಮಠಕ್ಕೂ ಪ್ರವಾಹದ ಬಿಸಿ ತಟ್ಟಿದೆ. ಫಲ್ಗುಣಿ ನದಿಯಲ್ಲಿ ಉಂಟಾಗಿರುವ ನೆರೆ ನೀರು ಮಠ, ಗೋಶಾಲೆ, ದೇವಸ್ಥಾನಗಳಿಗೂ ನುಗ್ಗಿದೆ.
ವಜ್ರದೇಹಿ ಮಠದ ಆವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಮಠ ಪೂರ್ತಿ ಜಲಾವೃತಗೊಂಡಿದ್ದು, ಮಠದ ಒಳಭಾಗಕ್ಕೂ ನೆರೆ ನೀರು ನುಗ್ಗುವ ಆತಂಕ ಎದುರಾಗಿದೆ.ಗೋ ಶಾಲೆಗೂ ನೀರು ನುಗ್ಗಿರುವ ಕಾರಣ ಗೋವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಅಲ್ಲದೇ ಮಂಗಳೂರು – ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಎರಡೂ ಬದಿಯಲ್ಲೂ ನೆರೆ ನೀರು ಆವರಿಸಿದ್ದು, ಮದುವೆ ಕಲ್ಯಾಣ ಮಂಟಪ, ದೇವಸ್ಥಾನ, ಮನೆಗಳು ಜಲಾವೃತಗೊಂಡಿದೆ.
ಇದರ ಜೊತೆಗೆ ಕೃಷಿ ಭೂಮಿಗೂ ನದಿ ನೀರು ನುಗ್ಗಿದ್ದು, ಅಪಾಯದಲ್ಲಿದ್ದವರನ್ನು ಎಸ್ ಡಿಆರ್ ಎಫ್ ಪಡೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ.
ಇದೇ ವೇಳೆ ಗುರುಪುರ ಸಮೀಪದ ಉಳಾಯಿಬೆಟ್ಟು ಗ್ರಾಮದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಕಾರಣ ನೂರಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಡಿತವಾಗಿದ್ದು, ಮನೆಗಳಿಗೂ ನೀರು ನುಗ್ಗಿದೆ.
ಅಪಾಯದಲ್ಲಿರುವವರನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡಿದ್ದು, ರಸ್ತೆಯಲ್ಲಿ ವಾಹನಗಳು ತೆರಳದಂತೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದಾರೆ.