ಮಂಗಳೂರು ವಿವಿ ಕಾಲೇಜಿನ ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಮಾಡಿದ ಆರೋಪಕ್ಕೆ ಮಾಜಿ ಸಚಿವ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು. ಟಿ. ಖಾದರ್ ಪ್ರತಿಕ್ರಿಯೆ ನೀಡಿದರು.
ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸಮಸ್ಯೆ ಹೇಳಿದಾಗ ಖಾದರ್ ಕ್ರಿಕೆಟ್ ಆಟದಲ್ಲಿ ಬ್ಯುಸಿ ಇದ್ದರು” ಎಂಬ ಹಿಜಾಬ್ ವಿದ್ಯಾರ್ಥಿನಿಯ ಆರೋಪದ ಕುರಿತು ಮಾತನಾಡಿದರು.
“ಹಿಜಾಬ್ ವಿದ್ಯಾರ್ಥಿನಿಯರು ದುರುದ್ದೇಶ ಪೂರಿತವಾಗಿ ಹೇಳಿಕೆ ಕೊಟ್ಟಿದ್ದಾರಾ?, ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಟ್ಟಿದ್ದಾರಾ? ಏನು ಅಂತಾ ವಿಚಾರ ಗೊತ್ತಿಲ್ಲ. ಅವರ ಹೇಳಿಕೆಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ನನಗೆ ಕಾಲ್ ಬಂದಾಗ ನನ್ನಿಂದಾದ ನೆರವು ನೀಡಿದ್ದೇನೆ, ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಸಹಾಯ ಮಾಡಿದ್ದೇನೆ ಎಂದರು.
ವಿದ್ಯಾರ್ಥಿನಿಯರಿಗೆ ಕಾನೂನನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ ಅಂತಾ ಹೇಳಿದ್ದೇನೆ. ಕಾನೂನು ಪ್ರಕಾರ ಹೋರಾಟ ಮಾಡಲು ಸೂಚಿಸಿದ್ದೇನೆ. ಆ ಬಳಿಕ ವಿದ್ಯಾರ್ಥಿನಿಯರು ಒಂದು ವಾರ ನನ್ನನ್ನು ಸಂಪರ್ಕ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.
ಪೋನ್ ಮಾಡಿ ಮಾತನಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಚೇರಿಯಿಂದ ಪೋನ್ ಮಾಡಿಸಿದ್ದೇನೆ. ನಾನೇ ಖುದ್ದು ಫೋನ್ ಮಾಡಿದ್ದೇನೆ. ಆದರೆ ವಿದ್ಯಾರ್ಥಿನಿಯರು ಕರೆ ಸ್ವೀಕಾರ ಮಾಡಿಲ್ಲ. ರಾಂಗ್ ನಂಬರ್ ಅಂತಾ ಹೇಳಿ ಕರೆ ಕಟ್ ಮಾಡಿಲ್ಲ. ವಿದ್ಯಾರ್ಥಿನಿಯರು ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿದ್ದಾ? ಹೇಳಿಸಿದ್ದಾ ಗೊತ್ತಿಲ್ಲ. ವಿದ್ಯಾರ್ಥಿನಿಯರು ಸುಳ್ಳು ಹೇಳಬಾರದು. ಸುಳ್ಳು ಹೇಳಿ ಅವರ ಗೌರವ, ಧರ್ಮದ ಗೌರವ ತೆಗೆಯಬಾರದು. ಒಬ್ಬರು ಸುಳ್ಳು ಹೇಳಿದರೆ ಎಲ್ಲರ ಗೌರವ ಹಾಳಾಗುತ್ತದೆ. ವಿದ್ಯಾರ್ಥಿನಿಯರ ವ್ಯಕ್ತಿತ್ವ ಹಾಳಾಗುತ್ತದೆ’ ಎಂದು ಯು. ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.