ಪುತ್ತೂರು: ಲಾಕ್ ಡೌನ್ ನ ಕಾರಣಕ್ಕೆ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ತನ್ನ ಕೈಚಳಕದಿಂದ ಕೆಮ್ಮಿಂಜೆಯಲ್ಲಿ ಬೈಕ್ ಮತ್ತು ಮುಕ್ರಂಪಾಡಿಯ ಅಂಗಡಿಯೊಂದರಿಂದ ತೂಕದ ಯಂತ್ರಗಳನ್ನು ಕಳವು ಮಾಡಿದ ಆರೋಪಿಯೋರ್ವನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕುಶಾಲನಗರ ನಿವಾಸಿಯಾಗಿರುವ, ಪುತ್ತೂರು ಬೆದ್ರಾಳದಲ್ಲಿ ತನ್ನ ಚಿಕ್ಕಮ್ಮ ಜುಬೈದಾ ಅವರ ಮನೆಯಲ್ಲಿ ವಾಸ್ತವ್ಯವಿದ್ದ ರೋಶನ್ ಯಾನೆ ನೌಫಲ್ (20ವ) ಬಂಧಿತ ಅರೋಪಿ.
ತನ್ನ ಚಿಕ್ಕಮ್ಮನ ಮನೆಗೆ ಬಂದ ರೋಶನ್ ಯಾನೆ ನೌಫಲ್ ಊರಿಗೆ ತೆರಳುವ ಸಂದರ್ಭ ಲಾಕ್ಡೌನ್ ಆಗಿದ್ದರಿಂದ ಚಿಕ್ಕಮ್ಮನ ಮನೆಯಲ್ಲೇ ಉಳಿದು ಕೊಳ್ಳಬೇಕಾಯಿತು. ಈ ನಡುವೆ ಆತ ತನ್ನ ಕಳ್ಳತನದ ಕೈಚಳಕ ಆರಂಭಿಸಿ ಮೇ.೪ರಂದು ಮಂಗಳೂರು ಕೈಕಂಬದ ನೌಷದ್ ಅವರ ಹೆಂಡತಿ ಮನೆ ಕೆಮ್ಮಿಂಜೆಯ ಸಂಜಯನಗರದಲ್ಲಿ ಮನೆಯಂಗಳದ ಕಾರ್ಶೆಡ್ನಲ್ಲಿ ನಿಲ್ಲಿಸಿದ ಬೈಕ್ ಕಳವು ಮಾಡಿದ್ದರು.
ಬಳಿಕ ಚಿಕ್ಕಮುಡ್ನೂರು ತಾರಿಗುಡ್ಡೆ ನಿವಾಸಿ ಇಬ್ರಾಹಿಂ ಅವರ ಮುಕ್ರಂಪಾಡಿಯಲ್ಲಿರುವ ತರಕಾರಿ ಅಂಗಡಿಯಿಂದ ಮೂರು ತೂಕದ ಯಂತ್ರಗಳನ್ನು ಕಳವು ಮಾಡಿದ್ದರು. ಮೇ ೫ರಂದು ಕಳದ ಘಟನೆ ಬೆಳಕಿಗೆ ಬಂದಿದ್ದು, ಬೈಕ್ ಮತ್ತು ತರಕಾರಿ ಅಂಗಡಿಯ ಮಾಲಕರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಆರೋಪಿ ನೌಶದ್ ಯಾನೆ ನೌಫಲ್ ಅವರನ್ನು ಮೇ 6ರಂದು ಬೆದ್ರಾಳದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಬೈಕ್ ಮತ್ತು ಮೂರು ತೂಕದ ಸ್ಕೇಲ್ ಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿ ನೌಫಲ್ ವಿಚಾರಣೆ ವೇಳೆ ಇನ್ನೋರ್ವ ಆರೋಪಿ ಕಳವಿನಲ್ಲಿ ಭಾಗಿಯಾಗಿದ್ದು ಆತನ ಪತ್ತೆಗಾಗಿ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ಕಳವಾದ ಬೈಕ್ ನ ಮೊತ್ತ ರೂ. 20 ಸಾವಿರ ಮತ್ತು ತರಕಾರಿ ಅಂಗಡಿಯಿಂದ ಕಳವಾದ ಸ್ಕೇಲ್ ಮತ್ತು ಚಿಲ್ಲರೆ ಹಣ ಒಟ್ಟು ಮೌಲ್ಯ ರೂ.19 ಸಾವಿರ ಆಗಿತ್ತು.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಮತ್ತು ಡಿವೈಎಸ್ಪಿ ದಿನಕರ್ ಶೆಟ್ಟಿಯವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ನೇತೃತ್ವದಲ್ಲಿ ಎಸ್.ಐ ಜಂಬುರಾಜ್ ಮಹಾಜನ್, ಎ.ಎಸ್.ಐ ಬೆಳಿಯಪ್ಪ ಗೌಡ, ಶ್ರೀಧರ ಮಣಿಯಾಣಿ, ಹೆಡ್ ಕಾನ್ಸ್ಟೆಬಲ್ ಗಳಾದ ಜಗದೀಶ್, ಕೃಷ್ಣಪ್ಪ, ಮಂಜುನಾಥ, ಚಾಲಕ ನಾಗೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.