ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಪುತ್ತೂರು ಮೂಲದ ಯುವಕನೋರ್ವನ ಮೃತದೇಹ ಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗೂಡಿನಬಳಿ ನಡೆದಿದೆ. ಮೃತ ಯುವಕನನ್ನು ಪುತ್ತೂರು ಮೂಲದ ನಿರಂಜನ್ (35) ಎಂದು ಗುರುತಿಸಲಾಗಿದೆ.
ಸುಳಿವು ನೀಡಿದ ಅನಾಥ ಬೈಕ್ :
ನಿನ್ನೆ ತಡರಾತ್ರಿಯಿಂದ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯಲ್ಲಿ ಬೈಕೊಂದು ನಿಂತಿತ್ತು. ಇಂದು ಬೆಳಗ್ಗೆಯೂ ಬೈಕ್ ಅಲ್ಲೇ ಇದ್ದುದರಿಂದ ಅನುಮಾನಗೊಂಡ ಗೂಡಿನಬಳಿ ಪರಿಸರದ ಯುವಕರು ನದಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬೈಕ್ನಲ್ಲಿ ದೊರೆತ ದಾಖಲೆ ಪತ್ರಗಳ ಆಧಾರದಲ್ಲಿ ಮೃತ ಯುವಕನ ಹೆಸರು, ವಿಳಾಸ ಪತ್ತೆಯಾಗಿದೆ. ಮೃತ ನಿರಂಜನ್ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ವರ್ಷದ ಹಿಂದೆ ಊರಿಗೆ ಬಂದಿದ್ದರು. ವಿವಾಹಿತರಾಗಿರುವ ಅವರಿಗೆ ಒಂದು ಹೆಣ್ಣು ಮಗು ಇದೆ ಎಂದು ತಿಳಿದು ಬಂದಿದೆ.
ಮೃತದೇಹ ಪತ್ತೆ ಹಚ್ಚಲು ಸ್ಥಳೀಯ ಈಜುಗಾರರಾದ ಹಾರಿಸ್, ಮುಹಮ್ಮದ್ ಮಮ್ಮು, ಇಬ್ರಾಹೀಂ, ಅಮ್ಮಿ, ಇಕ್ಬಾಲ್, ಶಮೀರ್ ಅವರ ತಂಡ ಸಹಕರಿಸಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಬುಧವಾರ ರಾತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.