ಪುಂಜಾಲಕಟ್ಟೆ: ಇದೆ ತಿಂಗಳ 24 ರಂದು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಪುಂಜಾಲಕಟ್ಟೆಯ ಎಸ್ಐ ಸೌಮ್ಯ ನೇತೃತ್ವದ ಪೋಲೀಸರ ತಂಡ ಯಶಸ್ವಿಯಾಗಿದ್ದಾರೆ.
ಆದರೆ ಅಚ್ಚರಿ ಎಂಬಂತೆ ಈ ಮನೆಯ ಕಳ್ಳತನ ಮಾಡಿದ್ದು ಮಾತ್ರ ಮನೆಯ ಒಡತಿ.
ಹೌದು, ಕಳೆದ 3 ದಿನಗಳ ಹಿಂದೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಪುಳಿಮಜಲು ನಿವಾಸಿ ಪುರುಷೋತ್ತಮ ಗೌಡ ಎಂಬವರ ನಿವಾಸದಿಂದ ಕಳ್ಳರು ಸುಮಾರು 60 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರು ತನಿಖೆ ನಡೆಸಿದಾಗ ಪುರುಷೋತ್ತಮ ಗೌಡ ಅವರ ಹೆಂಡತಿಯೇ ಈ ಕಳ್ಳತನ ನಡೆಸಿರುವ ಬಗ್ಗೆ ದೃಢವಾಗಿತ್ತು.
ಪುರುಷೋತ್ತಮ ಗೌಡರವರ ಪತ್ನಿ ತನ್ನ ವೈಯಕ್ತಿಕ ಹಣಕಾಸಿನ ವ್ಯವಹಾರದ ನಿಮಿತ್ತ ಸದರಿ ಆಭರಣಗಳನ್ನು ಕಳ್ಳತನ ಮಾಡಿದ್ದು, ನಂತರ ತನ್ನ ಪತಿ ಬಳಿ ಆಭರಣ ಕಳ್ಳತನವಾಗಿರುವುದಾಗಿ ಎಂದು ಸುಳ್ಳು ಮಾಹಿತಿ ನೀಡಿದ್ದರು.
ಆದರೆ ಪೊಲೀಸ್ ತನಿಖೆಯ ವೇಳೆ ಸದರಿ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಪ್ರಸ್ತುತ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿರುತ್ತದೆ.