ಮಂಗಳೂರು: ಅಪ್ರಾಪ್ತೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಂಗಳೂರಿನಲ್ಲಿ ನಾಲ್ವರನ್ನು ಬಂಧಿಸಿ, ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಳ್ಯ ತಾಲೂಕಿನ ಕರಿಕ್ಕಳ ಪಂಬೆತ್ತಾಡಿ ನಿವಾಸಿ ಗುಲಾಬಿ ನಾಯ್ಕ್ (29), ಕುಂದಾಪುರ ಹೊಸೂರು ನಿವಾಸಿ ಮಂಜುನಾಥ (26), ಬ್ರಹ್ಮಾವರ ಕೀಳಿಂಜೆ ನಿವಾಸಿ ಶಶಿಧರ (42), ಉಡುಪಿ ತೆಂಕನಿಡಿಯೂರಿನ ರೋವೆಲ್ ಸೂರಜ್(47) ಬಂಧಿತರು.
ಅಪ್ರಾಪ್ತ ಬಾಲಕಿ ತಂಗಿ ಹಾಗೂ ಅಕ್ಕನ ಜೊತೆ ಮಂಗಳೂರಿನ ಬಾಡಿಗೆ ಕೋಣೆಯೊಂದರಲ್ಲಿ ವಾಸವಾಗಿದ್ದಳು. ಅಲ್ಲದೇ ಆಕೆ ತಾನು ವೇಶ್ಯಾವಾಟಿಕೆ ದಂಧೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯನ್ನು ಆಗಾಗ ಉಡುಪಿ ಮಣಿಪಾಲದಲ್ಲಿ ದಂಧೆಗೆ ಬಳಸಿಕೊಳ್ಳುತ್ತಿದ್ದ ಗುಲಾಬಿ ನಾಯ್ಕ್ ಮತ್ತು ಸೂರಜ್ ಎಂಬವರು ಬುಧವಾರ ಒತ್ತಾಯದಿಂದ ಶಶಿ ಎಂಬವನೊಂದಿಗೆ ತೆರಳುವಂತೆ ಸೂಚಿಸಿದ್ದಾನೆ. ಆಗ ಆಕೆ ಈ ದಿನ ಬೇಡ ಎಂದು ನಿರಾಕರಿಸಿದ್ದಾಳೆ.
ಇದೇ ವಿಚಾರಕ್ಕೆ ಇವರ ನಡುವೆ ಜಗಳ ನಡೆದು ಬಳಿಕ ಅವರೆಲ್ಲರೂ ಕಾಪುವಿನ ಬಾರೊಂದರಲ್ಲಿ ಒಟ್ಟಿಗೆ ಬಿಯರ್ ಕುಡಿಯುತ್ತಿದ್ದರು. ಆಗ ಬಾಲಕಿ ತನ್ನ ಅಕ್ಕನಿಗೆ ಫೋನ್ ಮಾಡಿದ್ದು, ಆ ವೇಳೆ ಫೋನ್ನಲ್ಲಿ ಗುಲಾಬಿ ಜತೆ ಬಾಲಕಿಯ ಅಕ್ಕನಿಗೆ ಜಗಳ ನಡೆದಿದೆ. ಸಿಟ್ಟುಗೊಂಡ ಗುಲಾಬಿ ಇತರ ಆರೋಪಿಗಳೊಂದಿಗೆ ಹಳೆಯಂಗಡಿಯ ಬಾಲಕಿಯನ್ನು ಬಲವಂತದಿಂದ ಕಾರಿನಲ್ಲಿ ಹಾಕಿ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡುತ್ತಾ ಉಡುಪಿಯತ್ತ ಹೊರಟಿದ್ದಾರೆ. ಆಗ ರಾತ್ರಿ 9.30 ವೇಳೆಗೆ ಕಟಪಾಡಿ ಬಳಿ ಅಪ್ರಾಪ್ತ ಯುವತಿ ರಕ್ಷಿಸುವಂತೆ ಜೋರಾಗಿ ಕೂಗಿಕೊಂಡಿದ್ದಾಳೆ. ಕೂಡಲೇ ಸಾರ್ವಜನಿಕರು ಆರೋಪಿಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಆಗ ಇಡೀ ಪ್ರಕರಣ ಬಯಲಾಗಿದೆ.