ಬಂಟ್ವಾಳ: ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ 55 ವರ್ಷಕ್ಕೂ ಹೆಚ್ಚು ಸುದೀರ್ಘ ಕಾಲ ಪ್ರಧಾನ ಅರ್ಚಕರಾಗಿದ್ದ ವೇದಮೂರ್ತಿ ಸೀತಾರಾಮ ನೂರಿತ್ತಾಯ ದೈವಾಧೀನರಾಗಿದ್ದಾರೆ.
ಕೃಷಿಕರೂ ಆಗಿರುವ ಶ್ರೀಯುತರು ತನ್ನ ಪೌರೋಹಿತ್ಯದ ಸೇವೆಯಲ್ಲಿ ಸತ್ಯ ನಿಷ್ಠೆ ಪ್ರಾಮಾಣಿಕತೆಯಿಂದ ತೊಡಗಿಕೊಂಡು, ಅತ್ಯಂತ ಭಕ್ತಿಯಿಂದ ದೈವ ದೇವರ ಪೂಜೆಯನ್ನು ಮಾಡಿಕೊಂಡು ಬಂದಿರುವವರು. ಮಾಣಿ ಗ್ರಾಮದಲ್ಲಿ ಹಿಂದಿನ ಕಾಲದಿಂದ ನಡೆದುಕೊಂಡು ಬರುತ್ತಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಮತ್ತು ಗ್ರಾಮ ದೈವಗಳ ನೇಮಗಳಲ್ಲಿ ಸಕ್ರಿಯರಾಗಿ ತನ್ನ ಪೂಜಾ ಕೈಂಕರ್ಯಗಳೊಂದಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಚಿಂತನೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಆ ಮೂಲಕ ಜನಮಾನಸದ ಗೌರವ ಮತ್ತು ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಾಣಿಗುತ್ತು ಸಚಿನ್ ರೈ, ಅರೆಬೆಟ್ಟುಗುತ್ತು ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಜಗನ್ನಾಥ ಚೌಟ ಬದಿಗುಡ್ಡೆ, ಬಾಲಕೃಷ್ಣ ಆಳ್ವ ಕೊಡಾಜೆ, ಸದಾಶಿವ ಶೆಟ್ಟಿ ಶಂಭುಗ, ರಾಮಚಂದ್ರ ಪೂಜಾರಿ ಪಾದೆ, ಲೋಕೇಶ್ ಪೂಜಾರಿ ಪಲ್ಲತ್ತಿಲ ಮತ್ತಿತರರು ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.