ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಬಂಧಿಸಿರುವ ಶಫೀಕ್ ಹಾಗೂ ಝಾಕೀರ್ ನನ್ನು ನಿನ್ನೆ ಸುಳ್ಯ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು. ಸದ್ಯ ಶಫೀಕ್ ಮಾತ್ರ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಇನ್ನಿಬ್ಬರು ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಜೊತೆಗೆ ಝಾಕೀರ್ ಗೆ ದಿನಾಂಕ 12-08- 2022ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರ ಕೋರಿಕೆಯ ಮೇರೆಗೆ ಶಫೀಕ್ ನನ್ನು ದಿನಾಂಕ 06-08-2022 ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಪಿ.ಎಫ್. ಐ ಸಂಘಟನೆ ಹಾಗೂ ಎಸ್ಡಿಪಿಐ ಪಕ್ಷದ ಕಾರ್ಯಕರ್ತರಾಗಿದ್ದಾರೆ . ಅಬ್ದುಲ್ ಹ್ಯಾರಿಸ್ ಈ ಹಿಂದೆ ವಿದೇಶದಲ್ಲಿದ್ದು ಸದ್ಯ ಊರಿನಲ್ಲೇ ಇದ್ದ. ಶೇಕ್ ಸದ್ದಾಮ್ ಹುಸೇನ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಹೊಂದಿದ್ದಾನೆ.ಸದ್ದಾಂ ಹುಸೇನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಬೂತ್ ಸಮಿತಿಯ ಅಧ್ಯಕ್ಷನಾಗಿದ್ದಾನೆ. ಅಬ್ದುಲ್ ಹ್ಯಾರಿಸ್ ಕೋಶಾಧಿಕಾರಿಯಾಗಿ ಗುರುತಿಸಿಕೊಂಡಿದ್ದಾನೆ.