ಮಂಗಳೂರು : ಜಗದೀಶ್ ಅಧಿಕಾರಿ ಕೋಟಿ ಚೆನ್ನಯರ ಬಗ್ಗೆ ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳದೇ ಅವರ ಮುಖಕ್ಕೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಘೋಷಿಸಿದ್ದ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಜಗದೀಶ್ ಅಧಿಕಾರಿ ಅವರು ಕ್ಷಮೆ ಕೇಳುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ.
ಹೌದು… ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಿನ್ನೆ ಸಂಜೆ ಮೂಡಬಿದ್ರಿ ಬಳಿಯ ಗರಡಿಯಲ್ಲಿ ಕ್ಷಮೆಯಾಚನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ ಘೋಷಿಸಿದ್ದ 1 ಲಕ್ಷ ರೂ. ಬಹುಮಾನವನ್ನು ಸಮಾಜದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವುದಾಗಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.
ಅಧಿಕಾರಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಪ್ರತಿಭಾ ಕುಳಾಯಿ ಅವರು ಪತ್ರಿಕಾಗೋಷ್ಠಿ ಕರೆದು ಅಧಿಕಾರಿ ಕೂಡಲೇ ಕೋಟಿ ಚೆನ್ನಯರ ಗರಡಿಯಲ್ಲಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದರು.ಬಳಿಕ ಫೇಸ್ ಬುಕ್ ಲೈವ್ ನಲ್ಲಿಯೂ, ಅಧಿಕಾರಿ ಮೂರು ದಿನಗಳ ಒಳಗೆ ಕ್ಷಮೆ ಯಾಚಿಸದಿದ್ದರೆ ಸಮುದಾಯದ ಯಾರಾದರೂ ಯುವಕರು ಅಧಿಕಾರಿ ಮುಖಕ್ಕೆ ಮಸಿ ಬಳಿಯಲು ಮುಂದೆ ಬಂದಲ್ಲಿ ಅವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿದ್ದರು.
ಇಷ್ಟೇ ಅಲ್ಲದೇ ಇದೀಗ ಪ್ರತಿಭಾ ಅವರು ಮುಂದಿನ ಮೂರು ದಿನಗಳ ಒಳಗಾಗಿ ಜಗದೀಶ್ ಅಧಿಕಾರಿಯನ್ನು ಪಕ್ಷದಿಂದ ಉಚ್ಚಾಟಿಸದಿದ್ದಲ್ಲಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.