ಮಂಗಳೂರು: ತಾಲಿಬಾನಿಗಳ ಕೈವಶವಾದ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಕನ್ನಡಿಗರನ್ನು ತವರಿಗೆ ಕರೆತರಲಾಗಿದ್ದು, ಕಾಬೂಲ್ನಿಂದ ದೆಹಲಿಗೆ ನಿನ್ನೆ ಏರ್ ಲಿಫ್ಟ್ ಆಗಿದ್ದ ಮಂಗಳೂರಿನ ಪ್ರಸಾದ್ ಆನಂದ್ ಕೊಲ್ಯದಲ್ಲಿರುವ ಮನೆಗೆ ಬಂದು ತಲುಪಿದ್ದಾರೆ.
ಕಾಬೂಲ್ನಲ್ಲಿ ಹತ್ತು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಪ್ರಸಾದ್ ಆನಂದ್, ಮಂಗಳೂರು ಹೊರವಲಯದ ಕೊಲ್ಯ ಕನೀರ್ ತೋಟದ ಮನೆಗೆ ಆಗಮಿಸಿದ್ದು ಕುಟುಂಬಸ್ಥರು ಹಾಗೂ ಮಂಗಳೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಅವರನ್ನು ಬರಮಾಡಿಕೊಂಡಿದ್ದಾರೆ.
2021ರ ಪೆಬ್ರವರಿಗೆ ಆಗಮಿಸಿದ್ದ ಪ್ರಸಾದ್ ಎಪ್ರಿಲ್ 3ರಂದು ಅಫ್ಘಾನಿಸ್ಥಾನಕ್ಕೆ ತೆರಳಿದ್ದರು. ಆ ಬಳಿಕ ಅಫಘಾನಿಸ್ಥಾನದಲ್ಲಿ ತಾಲಿಬಾನ್ ಅಕ್ರಮಣ ಆರಂಬಿಸಿದ್ದು , ಕಾಬೂಲ್ ನಲ್ಲಿದ್ದ ಪ್ರಸಾದ್ ಸೇರಿದಂತೆ ಐದು ಮಂದಿ ಕನ್ಬಡಿಗರನ್ನು ಏರ್ ಲಿಫ್ಟ ಮಾಡಿ ಕತಾರ್ ಗೆ ಕೊಂಡೊಯ್ದಿದ್ದು, ಬಳಿಕ ಭಾನುವಾರ ರಾತ್ರಿ ದೆಹಲಿ ತಲುಪಿ, ಇಂದು ಬೆಳಗ್ಗೆ ಕೊಲ್ಯ ಕನೀರುತೋಟದಲ್ಲಿರುವ ಮನೆಗೆ ತಲುಪಿದ್ದಾರೆ.
ಕಾಬೂಲ್ ಏರ್ಪೋರ್ಟ್ನಲ್ಲಿ ಜನ ಜಾಸ್ತಿ ಇದ್ದಿದ್ದು, ಎಂಬೆಸ್ಸಿಯವರು ಬಂದು ಸಹಾಯ ಮಾಡಿದ್ದರು ಅಂತಾ ಆಫ್ಘಾನ್ನಲ್ಲಿದ್ದ ಪ್ರಸಾದ್ ಆನಂದ್ ಹೇಳಿದ್ದಾರೆ.
ಆಫ್ಘಾನಿಸ್ತಾನದಿಂದ ವಾಪಸ್ ಆದ ಪ್ರಸಾದ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.ಆಫ್ಘಾನಿಸ್ತಾನದಲ್ಲಿ ಆದ ಪರಿಸ್ಥಿತಿಯಿಂದ ಭಾರೀ ಆತಂಕಕ್ಕೆ ಒಳಗಾಗಿದ್ದೆವು. ರಾತ್ರಿ ನಿದ್ದೆ ಇರಲಿಲ್ಲ ಊಟ-ತಿಂಡಿ ಕೂಡ ಮಾಡುತ್ತಿರಲಿಲ್ಲ. ನಾವು ನಂಬಿರೋ ದೇವರುಗಳಲ್ಲಿ ಪ್ರತಿನಿತ್ಯ ಬೇಡಿಕೊಳ್ಳುತ್ತಿದ್ದೇವು. ಪ್ರತಿಯೊಂದು ನ್ಯೂಸ್ ಅಪ್ಡೇಟ್ ಪಡೆದುಕೊಳ್ಳುತ್ತಿದ್ದವು. ಈಗ ತುಂಬಾ ಸಂತೋಷವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.