ಬೆಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಇಂದು ಹೇಳಿಕೆ ನೀಡಿದ ಪ್ರಣವಾನಂದ ಸ್ವಾಮೀಜಿ, ಪ್ರವೀಣ್ ಹೆಂಡತಿಗೆ ಸರ್ಕಾರಿ ನೌಕರಿ ಸರ್ಕಾರ ನೀಡಲೇಬೇಕು ಎಂದು ಹೇಳಿದ್ದಾರೆ.
ನಮ್ಮ ಯುವಕರನ್ನ ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದ್ದು, ಮಂಗಳೂರು, ಉಡುಪಿಯಲ್ಲಿ ನಮ್ಮ ಸಮುದಾಯದ 12 ಲಕ್ಷ ಜನರು ಇದ್ದಾರೆ, ಬಿಜೆಪಿ ನಮ್ಮ ಯುವಕರನ್ನು ಯೂಸ್ ಅಂಡ್ ಥ್ರೋ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರವೀಣನ 16 ನೇ ದಿನದ ಕಾರ್ಯ ಆಗಸ್ಟ್ 13 ಕ್ಕೆ ನಡೆಯಲಿದ್ದು, ಅಂದು ಪ್ರವೀಣದ ಸಮಾಧಿಯ ಮುಂದೆ ನಾನು ನಮ್ಮ ಯುವಕರಿಗೆ
ಕೋಮುಗಲಭೆ, ಸಾಮರಸ್ಯ ಹಾಳು ಮಾಡೋದಕ್ಕೆ ಹೋಗಬಾರದು ಅಂತ ಯುವಕರಿಗೆ ಶಪಥ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.
ಆಗಸ್ಟ್ 13 ರಂದು ಗೋವಾ ಸೇರಿದಂತೆ 12 ರಾಜ್ಯದಲ್ಲಿ ಪ್ರವೀಣ್ ಗೆ ನ್ಯಾಯ ಕೇಳಿ ಹೋರಾಟ ಮಾಡುತ್ತೇವೆ ಎಂದು ಹೇಳಿರುವ ಸ್ವಾಮೀಜಿ, ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಲಿಲ್ಲ ಅಂದರೆ ರಾಜ್ಯ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ ಎಂದಿದ್ದಾರೆ.
ಅಲ್ಲದೇ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ವಿರುದ್ದವೂ ಸಮುದಾಯ ತಿರುಗಿ ಬೀಳುತ್ತದೆ ಎಂದು ಎಚ್ಚರಿಸಿರುವ ಪ್ರಣವಾನಂದ ಸ್ವಾಮೀಜಿ,
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಸಮುದಾಯದ ಶಕ್ತಿ ತೋರಿಸುತ್ತೇವೆ ಎಂದಿದ್ದಾರೆ.