ಬೆಂಗಳೂರು: ಹಣದ ವಿಷಯಕ್ಕೆ ಯುವಕನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ ಪ್ರಕರಣವನ್ನು 6 ತಿಂಗಳ ಬಳಿಕ ಪೊಲೀಸರು ಭೇದಿಸಿದ್ದಾರೆ. ಭೀಕರವಾಗಿ ಕೊಲೆಯಾದ ಶರತ್ ಸಾಲ ಪಡೆದು ಹಿಂತಿರುಗಿಸದೆ ಓಡಾಡುತ್ತಿದ್ದನಂತೆ. ಇದರಿಂದ ಶರತ್ ನನ್ನು 6 ತಿಂಗಳ ಹಿಂದೆ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಅಪಹರಿಸಿದ್ದ ಶರತ್ ನನ್ನು ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಆರೋಪಿಗಳು ಚಿತ್ರಹಿಂಸೆ ಕೊಟ್ಟಿದ್ದರಂತೆ. ಶರತ್ ನನ್ನು ಅರೆ ನಗ್ನಗೊಳಿಸಿ ಕಟ್ಟಿಹಾಕಿ ಥಳಿಸಿದ್ದರಂತೆ.
ನಂತ್ರ ಶರತ್ ನನ್ನ ಕೊಲೆ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು ಆರೋಪಿಗಳು. ಎಷ್ಟರಮಟ್ಟಿಗೆ ಪ್ರಕರಣ ನಿಗೂಢವಾಗಿತ್ತೆಂದರೆ ಕೊಲೆಯಾಗಿ ಆರು ತಿಂಗಳು ಕಳೆದರೂ ಯಾರಿಗೂ ಗೊತ್ತಿರಲಿಲ್ಲ.
ಕೊಲೆಯಾದಾತನ ಮೊಬೈಲಿನಿಂದ ಹೆತ್ತವರಿಗೆ ಬಂದಿತ್ತು ಮೆಸೇಜ್
ಕೊಲೆಯಾದವನ ಮೊಬೈಲಿನಿಂದ ಹೆತ್ತವರಿಗೆ ಮೆಸೇಜ್ ಬಂದಿತ್ತು. ಅದರಲ್ಲಿ ನಾನು ದುಡಿಯಲು ಹೋಗುತ್ತಿದ್ದೇನೆ. ಹುಡುಕಬೇಡಿ ಎಂದು ನಿಖರ ಸಂದೇಶ ಬಂದಿತ್ತು. ಮೃತ ಶರತ್ ನ ಮೊಬೈಲಿಂದ ಮೆಸೇಜ್ ಹಾಕಿ, ಆ ಮೊಬೈಲ್ ಅನ್ನು ಲಾರಿಯೊಂದರ ಮೇಲೆ ಎಸೆದಿತ್ತು ಹಂತಕರ ಪಡೆ. ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರ ರಾಜ್ಯಕ್ಕೆ ಹೊರಟುಹೋಗಿತ್ತು. ಕಾಲಾಂತರದಲ್ಲಿ ಮೊಬೈಲ್ ಸ್ವಿಚ್ ಆಫ್ ಆದ ಮೇಲೆ ಅದು ಸಂಪರ್ಕವೇ ಸಿಕ್ಕಿಲ್ಲ. ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆ ಎಂದೇ ನಂಬಿದ್ದರು ಶರತ್ ನ ಪೋಷಕರು. ಖತರ್ನಾಕ್ ಐಡಿಯಾ ಮೂಲಕ ಕೇಸ್ ಕ್ಲೋಸ್ ಮಾಡಿತ್ತು ಹಂತಕ ಗ್ಯಾಂಗ್.
ಠಾಣೆಗೆ ಬಂದ ಆ ಒಂದು ಪಾರ್ಸೆಲ್ ನಿಂದ ಸಿಕ್ಕಿದ ರಹಸ್ಯ: ಈ ಕಿಡ್ನಾಪ್, ಕೊಲೆ 9 ತಿಂಗಳ ಹಿಂದೆಯೇ ನಡೆದಿದೆ. ಆದರೆ ಪ್ರಕರಣ ನಡೆದು ಕೆಲವು ತಿಂಗಳ ನಂತರ ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದ ಪತ್ರ ಹಾಗೂ ಚಿತ್ರಹಿಂಸೆ ನೀಡಿದ ದೃಶ್ಯದ ಪೆನ್ ಡ್ರೈವ್ ಕೊಲೆಯ ಸುಳಿವು ನೀಡಿದೆ. ಬಳಿಕ ಪೊಲೀಸರು ವಿಶೇಷ ತಂಡ ರಚಿಸಿ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್ .ಜಿ ವೆಂಕಟಾಜಲಪತಿ, ಎ.ವಿ ಶರತ್, ಆರ್.ಶ್ರೀಧರ್, ಕೆ.ಧನುಷ್, ಯಲಹಂಕದ ಎಂ.ಪಿ ಮಂಜುನಾಥ್ ರವರನ್ನು ಪೊಲೀಸರು ಬಂಧಿಸಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ ಹುಡುಕಾಟ: ಶವ ಬಿಸಾಕಿದ ಚಾರ್ಮಾಡಿ ಘಾಟ್ನ ಸ್ಥಳ ಯಾವ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂದು ಖಚಿತವಾಗಿಲ್ಲದ ಅಥಲ್ಲದೆ ಇನ್ನೂ ಐದು ಆರೋಪಿಗಳ ಬಂಧನ ಬಾಕಿ ಇರುವ ಕಾರಣ ಒಂದೆರಡು ದಿನಗಳಲ್ಲಿ ಬೆಂಗಳೂರು ಪೊಲೀಸರು ಆರೋಪಿಗಳನ್ನು ಚಾರ್ಮಾಡಿ ಘಾಟ್ ಶವ ಬಿಸಾಕಿದ ಸ್ಥಳಕ್ಕೆ ಕರೆತಂದು ಶವದ ಹುಡುಕಾಟ ನಡೆಸಲಿದ್ದಾರೆ.