ಹಾಸನ : ಎಸ್ ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಚಾಕುವಿನಿಂದ ಇರಿದು ಪೊಲೀಸ್ ಕಾನ್ಸ್ಟೇಬಲ್ ಕೊಂದ ಘಟನೆ ಹಾಸನದಲ್ಲಿ ನಡೆದಿದೆ.ಮಮತಾ ಕೊಲೆಯಾದ ಮಹಿಳೆ.ಲೋಕನಾಥ್ ಕೊಲೆ ಮಾಡಿದ ಕಾನ್ಸ್ಟೇಬಲ್.
![](https://mahaxpress.com/wp-content/uploads/2024/07/WhatsApp-Image-2024-07-01-at-17.19.23.jpeg)
ಲೋಕನಾಥ್ ಹಾಗೂ ಮಮತಾ ಕಳೆದ ಹದಿನೇಳು ವರ್ಷಗಳ ಹಿಂದೆ ಪ್ರೀತಿ ವಿವಾಹವಾಗಿದ್ದರು ಹಾಸನ ಹೊರವಲಯದ ಚನ್ನಪಟ್ಟಣ ಬಡಾವಣೆಯ ಮಮತಾ ಹಾಗೂ ಕೆ.ಆರ್.ಪುರಂ ನಿವಾಸಿ ಲೋಕನಾಥ್ ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹ ಆಗಿದ್ದರು. ದಂಪತಿಗೆ ಮುದ್ಧಾದ ಎರಡು ಗಂಡುಮಕ್ಕಳಿದ್ದಾರೆ. ಕೆಲವು ವರ್ಷಗಳಿಂದ ಲೋಕನಾಥ್ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ. ಇದೇ ವಿಚಾರಕ್ಕೆ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಲ್ಲದೇ ದೈಹಿಕವಾಗಿ ಹಲ್ಲೆ ಸಹ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಮತಾ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಳು.
![](https://mahaxpress.com/wp-content/uploads/2024/07/WhatsApp-Image-2024-07-01-at-17.27.36.jpeg)
ಇನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಪತಿ-ಪತ್ನಿ ನಡುವೆ ಜೋರಾಗಿ ಜಗಳ ನಡೆದಿದೆ. ಪತಿ ಲೋಕನಾಥ್ ಕಿರುಕುಳದಿಂದ ಬೇಸತ್ತ ಮಮತಾ ಇಂದು ಪೊಲೀಸರಿಗೆ ದೂರು ಕೊಡುವುದಾಗಿ ಪತಿಗೆ ಹೇಳಿ ಇಂದು ಜಿಲ್ಲಾ ಪೊಲೀಸ್ ಕಚೇರಿ ಆವರಣಕ್ಕೆ ಬಂದಿದ್ದಾಳೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಲೋಕನಾಥ್ ಚಾಕುವಿನಿಂದ ಮಮತಾ ಎದೆಯ ಭಾಗಕ್ಕೆ ಬಲವಾಗಿ ಇರಿದಿದ್ದಾನೆ. ಇನ್ನು ಇರಿದ ರಭಸಕ್ಕೆ ಬೆನ್ನಿನಿಂದ ಚಾಕು ಹೊರಗೆ ಬಂದಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಮತಾಳನ್ನು ಸ್ಥಳದಲ್ಲೇ ಇದ್ದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಲೋಕನಾಥ್ನನ್ನು ಹಾಸನ ನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಗೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದೀಗ ಅಮ್ಮ ಸಾವನ್ನಪ್ಪಿದ್ರೆ ಅಪ್ಪ ಜೈಲು ಪಾಲಾಗಿದ್ದಾರೆ. ಏನೂ ಅರಿಯದ ಮಕ್ಕಳಿಬ್ಬರು ಅನಾಥರಾಗಿದ್ದಾರೆ.