
ಮಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಿನ್ನೆ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಲಾಗಿದೆ.
ಬಿಜೆಪಿ ಮುಖಂಡ ವಿಕಾಸ್ ಕುಮಾರ್ ಪುತ್ತೂರು ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೋನಿಯಾ ಗಾಂಧಿ ವಿರುದ್ದ ಎಫ್ಐಆರ್ ದಾಖಲಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ದೂರಿನಲ್ಲಿ ರಾಷ್ಟ್ರಗಾನಕ್ಕೆ ಅಪಮಾನವನ್ನು ಉಂಟು ಮಾಡಿ ಉದ್ದೇಶ ಪೂರ್ವಕ ಶಾಂತಿಭಂಗಕ್ಕೆ ಕಾರಣವಾಗುವ ಅರೋಪ ಮಾಡಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸದೇ ಇದ್ದಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ವಿಕಾಸ್ ಕುಮಾರ್ ಪುತ್ತೂರು ನಿರ್ಧರಿಸಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ನಿನ್ನೆ ವಂದೇ ಮಾತರಂ ಗಾಯನದ ವೇಳೆ ಸೋನಿಯಾ ಗಾಂಧಿ ಗಾಯನ ನಿಲ್ಲಿಸಲು ಸೂಚನೆ ನೀಡಿದ್ದರು ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಸೋನಿಯಾ ಗಾಂಧಿ ಗಾಯನ ನಿಲ್ಲಿಸಲು ಸೂಚಿಸಿಲ್ಲ ಬದಲಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಕುರ್ಚಿ ತಂದು ಕೊಡಲು ಹೇಳಿದ್ದರು ಎಂದು ಬಳಿಕ ಕಾಂಗ್ರೆಸ್ ಸಮಜಾಯಿಷಿ ನೀಡಿತ್ತು.


