ಮಂಗಳೂರು; ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನದ ಉಹಾಪೋಹಗಳಿಗೆ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ತೆರೆ ಎಳೆದಿದ್ದಾರೆ.
ವಿಷಪೂರಿತ ಆಹಾರ ಸೇವನೆಯಿಂದ ಹೀಗಾಗಿದ್ದು, ಆತ್ಮಹತ್ಯೆಯ ಪ್ರಯತ್ನ ಅಲ್ಲ ಎಂದಿದ್ದಾರೆ.
ಜೆಪ್ಪು ಬಪ್ಪಲ್ ನ ಅರವಿಂದ ರಾವ್ (52), ಪ್ರಭಾವತಿ (45), ಸೌರಭ್ (20) ಮತ್ತು ಪ್ರತೀಕ್ (18) ಅವರು ಮನೆಯಲ್ಲಿ ತೀವ್ರ ವಾಂತಿಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದರು. ಕುಟುಂಬ ಸದಸ್ಯರನ್ನು ರಕ್ಷಿಸಲು ಸಂಬಂಧಿಕರು ಮನೆಯ ಬಾಗಿಲು ಒಡೆದಿದ್ದರು. ಅವರ ಆರೋಗ್ಯ ತೀರಾ ಗಂಭೀರವಾಗಿದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಉದ್ದೇಶಪೂರ್ವಕವಾಗಿ ವಿಷ ಸೇವಿಸಿದ ಪ್ರಕರಣ ಎಂದು ಭಾವಿಸಲಾಗಿತ್ತು. ಕುಟುಂಬವು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದೆ ಎಂಬ ವದಂತಿಗಳು ಶೀಘ್ರದಲ್ಲೇ ಹರಡಲು ಪ್ರಾರಂಭಿಸಿ ಕೆಲ ಮಾಧ್ಯಮಗಳಲ್ಲೂ ವರದಿಯಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ‘ಕುಟುಂಬಕ್ಕೆ ವಿಷಾಹಾರ ಸೇವನೆಯಿಂದ ತೀವ್ರ ತೊಂದರೆಯಾಗಿತ್ತು. ಕುಟುಂಬದ ನಾಲ್ವರು ಐಸ್ ಕ್ರೀಂ ಮತ್ತು ಸೊಪ್ಪಿನಿಂದ ತಯಾರಿಸಿದ ಸಿಹಿತಿಂಡಿ ಸೇವಿಸಿದ್ದು ಅದು ಫುಡ್ ಪಾಯಿಸನ್ ಆಗಿರಬಹುದು’ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಾಲ್ವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.