ಅಯೋಧ್ಯೆ: ಕೋಟ್ಯಾಂತರ ಭಾರತೀಯರ ಬಹುದಿನಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಎಲ್ಲ ತಯಾರಿಗಳೂ ಆಗಿದ್ದು, ಶಿಲಾನ್ಯಾಸಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಲಖನೌಗೆ ಹೊರಟಿದ್ದು, ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ತಲುಪಲಿದ್ದಾರೆ.
ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುವ ಮುನ್ನ ಅಯೋಧ್ಯೆಯ ಹನುಮಾನ್ ಗಲ್ಲಿಯಲ್ಲಿರುವ ರಾಮನ ಬಂಟ ಹನುಮಂತನ ದೇಗುಲದಲ್ಲಿ ಮೊದಲು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಮೊದಲಿನಿಂದಲೂ ಯಾವುದೇ ಶುಭ ಸಮಾರಂಭಗಳು ನಡೆಯುವ ಮುನ್ನ ಹನುಮಂತನ ದೇಗುಲದಲ್ಲಿ ಪೂಜೆ ನಡೆಯುವುದು ವಾಡಿಕೆಯಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ನೆಡಲಿದ್ದಾರೆ ‘ದೇವ ವೃಕ್ಷ’
ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಭೂಮಿಪೂಜೆಗೂ ಮುನ್ನ ಅಲ್ಲಿಯೇ ಒಂದು ಗಿಡವನ್ನು ನೆಡಲಿದ್ದಾರೆ. ಹೌದು. ಅದುವೇ ಕೃಷ್ಣಪ್ರಿಯ ಪಾರಿಜಾತ. ದೇವ ವೃಕ್ಷವೆಂದೇ ಕರೆಯಲ್ಪಡುವ ಈ ಗಿಡವನ್ನು ನೆಡುವ ಮೂಲಕ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಲಿದ್ದಾರೆ.