ಮಡಿಕೇರಿ: ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಇತ್ತೀಚೆಗಷ್ಟೆ ಆಯೋಜಿಸಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕರ ಸಹಿತ ಹಲವು ಮಂದಿಯ ಜೇಬಿನಿಂದ ಪಿಕ್ ಪಾಕೆಟ್ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಮೂಲದ 11 ಮತ್ತು ಬೆಂಗಳೂರು ಮೂಲದ 2 ಆರೋಪಿಗಳನ್ನು ಇದೀಗ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಆರೋಪಿಗಳು ಪಿಕ್ ಪಾಕೆಟ್ ಮಾಡಿದ್ದ 1 ಲಕ್ಷದ 96 ಸಾವಿರದ 300 ರೂ.ಗಳ ಪೈಕಿ 65 ಸಾವಿರದ 960 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ 12 ಮೊಬೈಲ್ ಫೋನ್ಗಳು, 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ಮಾಹಿತಿ: ಶಿವಮೊಗ್ಗ ಭದ್ರಾವತಿಯ ಜಯಣ್ಣ ಅಲಿಯಾಸ್ ಕಿರಿಕ್ ಜಯ (38), ಪುಟ್ಟರಾಜು ಅಲಿಯಾಸ್ ಪುಟ್ಟ (39), ಸಿ. ನಾಗರಾಜ ಅಲಿಯಾಸ್ ಕೋತಿ ಕಿಚ್ಚ (43), ರಾಮು ಅಲಿಯಾಸ್ ಕುಳ್ಳರಾಮು (43), ಕೆ. ಉಮೇಶ್ (36), ಜಯಣ್ಣ ಅಲಿಯಾಸ್ ದೊಡ್ಡಜಯಣ್ಣ (53), ಬೋಜಪ್ಪ ಅಲಿಯಾಸ್ ಬೋಜ (50), ಮೆಹಬೂಬ್ ಸುಭಾನ್ (48), ಡಿ. ಗಿರೀಶ (31), ಬಾಲು (35), ಬೆಂಗಳೂರು ಹೆಬ್ಬುಗೋಡಿಯ ಹರೀಶ (35), ನೆಲಮಂಗಲದ ರಂಗಣ್ಣ ಅಲಿಯಾಸ್ ರಂಗ (50) ಬಂಧಿತರು.
ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ. ಪ್ರಕಾಶ್, ಠಾಣಾಧಿಕಾರಿ ಬಿ.ಎಸ್. ಉಮಾ, ಕುಶಾಲನಗರ ಠಾಣಾ ಸಿಬಂದಿ ಹಾಗೂ ಕ್ರೈಂ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಸಿಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.