ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ದರ್ಶನ್, ಪವಿತ್ರ ಗೌಡ ಸೇರಿ ಒಟ್ಟು 14 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಆರೋಪಿಗಳು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದಾರೆ. ಆರೋಪಿಗಳಿರುವ ಪೊಲೀಸ್ ಠಾಣೆಗೆ ಶಾಮಿಯಾನ ಹೊದಿಸುವಂತೆ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದು ಅದರಂತೆ ಶಾಮಿಯಾನ ಹಾಕಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ. ಸದ್ಯ ಆಯುಕ್ತರು ಕೂಡ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. ಜೊತೆಗೆ ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿನ್ನೆಯವರೆಗೆ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿದ್ದರು. ಈ ವೇಳೆ ಠಾಣೆ ಮುಂದೆ ಬ್ಯಾರಿಕೇಡ್ಗಳನ್ನು ಹಾಕಿದ್ದರು. ಆದರೆ ಇಂದು ಅಭಿಮಾನಿಗಳು ಕೂಡ ಠಾಣೆಯತ್ತ ಸುಳಿದಿಲ್ಲ. ಆದರೂ ಠಾಣೆಯ ಕಾಂಪೌಂಡ್ಗೆ ಶಾಮಿಯಾನ ಕಟ್ಟಿದ್ದು, ಭಾರೀ ಅನುಮಾನ ಹುಟ್ಟಿಸಿದೆ. ಮೊನ್ನೆ ಆರೋಪಿಗಳಿಗೆ ಠಾಣೆ ಒಳಗೆ ಬಿರಿಯಾನಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಈ ಬೆನ್ನಲ್ಲೇ ಇಂದು ಶಾಮಿಯಾನದಿಂದ ಮುಚ್ಚಿರುವುದು ಠಾಣೆ ಒಳಗಡೆ ಆರೋಪಿಗಳಿಗೆ ರಾಜಮರ್ಯಾದೆ ಕೊಡಲಾಗುತ್ತಿದೆಯಾ..? ಇವುಗಳನ್ನು ಮಾಧ್ಯಮಗಳಿಂದ ಮುಚ್ಚಿಡಲು ಈ ರೀತಿ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.
ಸಾರ್ವಜನಿಕರಿಗೂ ಪ್ರವೇಶ ನಿರ್ಬಂಧಿಸಿ ಠಾಣೆ ಕ್ಲೋಸ್ ಮಾಡಲಾಗಿದೆ. ಇನ್ನೊಂದೆಡೆ ತುರ್ತು ವಿಚಾರಗಳಿಗೆ ಠಾಣೆಗೆ ಸಂಪರ್ಕ ಮಾಡಲು ಬಂದವರಿಗೂ ಪೊಲೀಸರು ಪ್ರತಿಕ್ರಿಯೆ ನೀಡುತ್ತಿಲ್ಲ. ಸಾರ್ವಜನಿಕ ಆಸ್ತಿಯಾಗಿರೋ ಪೊಲೀಸ್ ಠಾಣೆಗೆ ಸೈಡ್ ವಾಲ್ ಕಟ್ಟೋದೇನಿದೆ..!?, ಯಾರನ್ನ ಮೆಚ್ಚಿಸೋಕೆ ಪೊಲೀಸರು ಈ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.