ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸುಬ್ರಹ್ಮಣ್ಯ ಪೊಲೀಸರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ, ವಿವಿಧ ಇಲಾಖೆ, ಸಾರ್ವಜನಿಕರ ಸಭೆ ನಡೆಸಿ ವಾಹನ ಪಾರ್ಕಿಂಗ್ ಹಾಗೂ ಹೊಸ ಸಂಚಾರ ನಿಯಮವನ್ನು ಜಾರಿಗೊಳಿಸಿದೆ.
ಜಾರಿ ಮಾಡಿರುವ ವಾಹನ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದರೆ ಇನ್ನು ಮುಂದೆ ದಂಡ ಬೀಳಲಿದೆ.
ವಾಹನ ಪಾರ್ಕಿಂಗ್ ಹಾಗು ಸಂಚಾರ ನಿಯಮ: ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್ವರೆಗೆ ಏಕಮುಖ ಪ್ರವೇಶ ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ಏಕಮುಖ ನಿರ್ಗಮನ ನಿಯಮ ಮಾಡಲಾಗಿದೆ. ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿ, ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ಒಂದು ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸುಬ್ರಹ್ಮಣ್ಯದ ಸಂಚಾರ, ವಾಹನ ನಿಲುಗಡೆ ನಿರ್ವಹಣೆಗೆ 7 ಗೃಹರಕ್ಷಕರು, ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಸಾರ್ವಜನಿಕರೂ ಠಾಣೆ ಅಥವಾ ಸಿಬ್ಬಂದಿಗೆ ಮಾಹಿತಿ ನೀಡಬಹುದು. ಪೊಲೀಸ್ ಠಾಣೆಯಿಂದಲೂ ಸಿಸಿಟಿವಿ ಕ್ಯಾಮೆರಾದ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ಪಿಎಸ್ಐ ಕಾರ್ತಿಕ್ ಅವರು ಈ ಕುರಿತಂತೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಚಾರ ನಿಯಮ ಅನುಷ್ಠಾನದಿಂದ ಪೇಟೆಯಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದ್ದು, ಎಲ್ಲರೂ ನಿಯಮ ಪಾಲಿಸಬೇಕು ಎಂದು ತಿಳಿಸಿದ್ದಾರೆ.