ಉಡುಪಿ: ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ, ಅದೊಂದು ನೋಂದಣಿಯಾಗಿರುವ ಸಂಸ್ಥೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ದೇಣಿಗೆ ಸಂಗ್ರಹಿಸಲಾಗಿದ್ದು, ದೇಣಿಗೆ ನೀಡದವರನ್ನು ಆರ್ಎಸ್ಎಸ್ ಪ್ರತ್ಯೇಕವಾಗಿ ಪಟ್ಟಿ ಮಾಡಿ ಅವರನ್ನು ಪ್ರತ್ಯೇಕರಂತೆ ನೋಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಶ್ರೀಗಳು, ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನು ಇದೆ. ನಮಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ. ಸಂಶಯಗಳನ್ನು ಮುಂದೆ ಇಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮುಚ್ಚು ಮರೆಯ ಯಾವುದೇ ವಿಷಯಗಳು ನಡೆಯುದಿಲ್ಲ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣದಲ್ಲಿ ಮುಚ್ಚುಮರೆಯ ಯಾವುದೇ ವಿಷಯಗಳು ನಡೆಯುವುದಿಲ್ಲ. ಎಲ್ಲವೂ ಆಡಿಟ್ ಆಗಿ ಅದಕ್ಕೆ ಬೇಕಾಗಿರುವಂತಹ ಪುರಾವೆಗಳನ್ನು ಕೊಡಲು ಸಾಧ್ಯವಿದೆ. ರಾಮ ಜನ್ಮಭೂಮಿ ಟ್ರಸ್ಟ್ ನಂತೆ ಅಧಿಕೃತವಾಗಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ವಿಹಿಂಪ ಪುಂಡು-ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹಾಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ, ಸಂಶಯಕ್ಕೆ ಪರಿಹಾರ ಇದೆ ಎಂದು ಉತ್ತರಿಸಿದರು.