ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಮೃತದೇಹದ ಭಾಗಗಳನ್ನು ನಾಯಿಗಳು ಕೊಂಡು ಹೋದ ಘಟನೆ ಶನಿವಾರ ರಾತ್ರಿ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಂತಡ್ಕದಲ್ಲಿ ನಡೆದಿದೆ.
ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು ಎನ್ನಲಾಗಿದೆ.

ಸಂಜೆ ವೇಳೆಗೆ ಪರಿಸರದ ವಾಸಿಗಳಿಗೆ ವಾಸನೆ ಬರಲಾರಂಭಿಸಿದ್ದಲ್ಲದೆ ಸ್ಮಶಾನ ಸಮೀಪದ ಮನೆಯವರು ತಮ್ಮ ಅಂಗಳದಲ್ಲಿ ನಾಯಿಯೊಂದು ಮಾಂಸದ ತುಂಡನ್ನು ತಿನ್ನುವುದನ್ನು ಗಮನಿಸಿದ್ದಾರೆ. ಬೆಂದಂತೆ ಇದ್ದ ಮಾಂಸವನ್ನು ಕಂಡು ಮೃತ ದೇಹದ ಭಾಗ ಎಂಬುದನ್ನು ಖಾತರಿ ಪಡಿಸಿದ್ದಾರೆ. ಅಲ್ಲದೆ ರುದ್ರಭೂಮಿಗೆ ಹೋಗಿ ಗಮನಿಸಿದಾಗ ಅರೆಬೆಂದ ಮೃತದೇಹ ಕಂಡು ಬಂದಿದೆ.
ತಕ್ಷಣವೇ ಸ್ಥಳೀಯರು ಸೇರಿ ಬೆಂಕಿಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಆಗಮಿಸಿ ವಾಸ್ತಾವ ಪರಿಸ್ಥಿತಿಯನ್ನು ಗಮನಿಸಿರುವುದಾಗಿ ತಿಳಿದು ಬಂದಿದೆ.