ಸುಳ್ಯ : ಆಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಡಿಪ್ರದೇಶವಾದ ಕಲ್ಲಪಳ್ಳಿಯ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಉಳಿದುಕೊಳ್ಳಲು ಬಸ್ ತಂಗುದಾಣ ಹಾಗೂ ಶೌಚಾಲಯಕ್ಕೆ ಸನಿಹದ ಮನೆಗಳಿಗೆ ತೆರಳಬೇಕಾದ ಸಂಕಷ್ಟವನ್ನು ಆಲಿಸಿದ ಸಚಿವ ಎಸ್. ಅಂಗಾರ ಅವರು ತತ್ಕ್ಷಣ ವ್ಯವಸ್ಥಿತ ಶೆಡ್ ಹಾಗೂ ಶೌಚಾಲಯ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಎಸ್.ಅಂಗಾರ ಅಲ್ಲಿನ ವ್ಯವಸ್ಥೆಯ ಕುರಿತು ಪರಿಶೀಲಿಸಿದಾಗ, ಬಸ್ ತಂಗುದಾಣದ ಪಕ್ಕ ಇರುವ ಜಾಗದಲ್ಲಿ ಹೊಸ ವ್ಯವಸ್ಥಿತ ಶೆಡ್ ನಿರ್ಮಿಸಿ ಶೌಚಾಲಯದ ವ್ಯವಸ್ಥೆ ಮತ್ತು ಸೋಲಾರ್ ದೀಪ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಎಂಜಿನಿಯರ್ ಮಣಿಕಂಠ ಅವರಿಗೆ ಶೆಡ್ ನಿರ್ಮಿಸುವಂತೆ ದೂರವಾಣಿ ಮೂಲಕ ಆದೇಶಿಸಿದರು.
ಗಡಿ ಪ್ರದೇಶದ ಗಡಿಗುರುತಿನ ಸಮಸ್ಯೆ ಪರಿಹರಿಸಲು ಉಭಯ ಜಿಲ್ಲಾಡಳಿತದ ಸಮ್ಮುಖದಲ್ಲಿ ಜಂಟಿ ಸರ್ವೇ ನಡೆಸಲಾಗುವುದು. ರಾಜ್ಯಕ್ಕೆ ಸಂಬಂಧಪಟ್ಟ ರಸ್ತೆಯ ಗಡಿ ಗುರುತನ್ನು ಸಮರ್ಪಕವಾಗಿ ಮಾಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.