ಬೆಂಗಳೂರು: ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ವಿವಿಧ ಜಿಲ್ಲೆಗಳ ರೈತರ ಜಮೀನಿನ ವಕ್ಫ್ ಆತಂಕದ ವಿಚಾರವೀಗ ಕೇಂದ್ರ ಸರಕಾರಕ್ಕೂ ತಲುಪಿದ್ದು, ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಜಗದಂಬಿಕಾ ಪಾಲ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಂಸತ್ತಿನ ಜಂಟಿ ಸದನ ಸಮಿತಿ (ಜೆಪಿಸಿ)ಯು ನ. 6 ಮತ್ತು 7ರಂದು ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಜಗದಂಬಿಕಾ ಪಾಲ್ ಅವರಿಗೆ ಜಂಟಿ ಸದನ ಸಮಿತಿಯ ಸದಸ್ಯರಾಗಿರುವ ಸಂಸದ ತೇಜಸ್ವಿ ಸೂರ್ಯ ಅವರು ಪತ್ರ ಬರೆದು, ರಾಜ್ಯದ ರೈತರ ಅಹವಾಲು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಸಮ್ಮತಿಸಿರುವ ಸಮಿತಿ, ಬುಧವಾರ ಮತ್ತು ಗುರುವಾರ ವಿಜಯಪುರ ಹಾಗೂ ಬೆಂಗಳೂರು ನಗರಕ್ಕೆ ಭೇಟಿ ನೀಡಲಿದೆ.
ವಕ್ಫ್ ನೋಟಿಸ್ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ವಿಜಯಪುರದ 400ಕ್ಕೂ ಹೆಚ್ಚು ರೈತರಿಗೆ ವಕ್ಫ್ ನೋಟಿಸ್ ರವಾನೆಯಾಗಿದ್ದು, ಇದೀಗ ವಿಜಯಪುರಕ್ಕಷ್ಟೇ ಸೀಮಿತವಾಗದೆ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಬಸವಣ್ಣನವರ ಕಾಲದ ಮಂದಿರಗಳಿಗೂ ವಕ್ಫ್ ನೋಟಿಸ್ ಕೊಟ್ಟಿದ್ದು, ಆಗಿನ್ನೂ ಇಸ್ಲಾಂ ಧರ್ಮವೇ ಹುಟ್ಟಿತ್ತೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇಅಲ್ಲದೆ ಅವರು, ಇದೀಗ ಸಂಸತ್ತಿನ ಮುಂದೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವಿದ್ದು, ಅಲ್ಲಿ ಚರ್ಚೆ ನಡೆದ ಬಳಿಕ, ಜಂಟಿ ಸದನ ಸಮಿತಿ ರಚನೆಯಾಗಿದೆ. ಆ ಸಮಿತಿ ವರದಿ ಇನ್ನೂ ಕೊಟ್ಟಿಲ್ಲ. ಅಷ್ಟರಲ್ಲಾಗಲೇ ಸಚಿವ ಜಮೀರ್ ಅವರು ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್ ಅದಾಲತ್ ನಡೆಸಿ, ನೋಟಿಸ್ಗಳನ್ನು ಜಾರಿಗೊಳಿಸುತ್ತಿದ್ದಾರೆ. ಈ ವಕ್ಫ್ ಅದಾಲತ್ನ್ನು ಯಾವ ಕಾನೂನಿನಡಿ ಮಾಡಲು ಅವಕಾಶವಿದೆ? ಕಂದಾಯ ಕಾನೂನಿನಲ್ಲಿ ಇದೆಯೇ? ವಕ್ಫ್ ಕಾಯ್ದೆಯಲ್ಲಿ ಇದೆಯೇ? ಇದಕ್ಕೆ ರಾಜ್ಯ ಸರ್ಕಾರವೇ ಉತ್ತರಿಸಬೇಕು ಎಂದು ಆಗ್ರಹಿಸಿದರು.