ಮಂಗಳೂರು: ಪಣಂಬೂರು ಜೋಕಟ್ಟೆಯಲ್ಲಿ ನಡೆದ ಅಪ್ರಾಪ್ತೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಚಿಕ್ಕಪ್ಪನ ಪರಿಚಿತನಾಗಿದ್ದ ಫಕೀರಪ್ಪ(51) ಬಂಧಿತ ಆರೋಪಿ.
ಮೂಲತಃ ಬೆಳಗಾವಿ ಜಿಲ್ಲೆಯ ಪರಸಘಡ ಹಂಚಿನಾಳದ ಫಕೀರಪ್ಪ ಜೋಕಟ್ಟೆ ವಿಜಯ ವಿಠ್ಠಲ ಭಜನ ಮಂದಿರ ಹಿಂದೆ ವಾಸಿಸುತ್ತಿದ್ದು. ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ.
ಮೃತ ಬಾಲಕಿಯ ಚಿಕ್ಕಪ್ಪನಿಗೆ ಆರೋಪಿಯು ಪರಿಚಿತನಾಗಿದ್ದು, ಬಾಲಕಿಯ ಚಿಕ್ಕಪ್ಪನ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಆ. 6ರಂದು ಬೆಳಗ್ಗೆ ಬಾಲಕಿ ಒಬ್ಬಳೇ ಮನೆಯಲ್ಲಿರುವಾಗ ಬಂದಿದ್ದು, ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ಆಗ ಬಾಲಕಿ ಇದಕ್ಕೆ ಪ್ರತಿರೋಧ ವ್ಯಕ್ತಪ ಡಿಸಿದ್ದುದಕ್ಕೆ ಬಾಲಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಲಭ್ಯ ಸುಳಿವು ಆಧರಿಸಿ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಎಸಿಪಿಗಳಾದ ರವೀಶ್ ನಾಯಕ್, ಮನೋಜ್ ಕುಮಾರ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪಣಂಬೂರು ಇನ್ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್, ಎಸ್ಐ ಶ್ರೀಕಲಾ, ಎಎಸ್ಐ ಕೃಷ್ಣ, ಎಚ್ಸಿ ಸತೀಶ್ ಎಂ.ಆರ್., ಸಯ್ಯದ್ ಇಂತಿಯಾಜ್, ಸಿಪಿಸಿ ಶಶಿಕುಮಾರ್, ರಾಕೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.