ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆ ಅದ್ದೂರಿಯಾಗಿ ಆರಂಭಗೊಂಡಿತು.
ಸಹಸ್ರಾರು ಭಕ್ತಬಂಧುಗಳು ಶಿಸ್ತಿನಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಪಾದಯಾತ್ರೆಯಲ್ಲಿ ಹಲವಾರು ಟ್ಯಾಬ್ಲೋ, ಭಜನೆ ತಂಡಗಳು ಭಾಗವಹಿಸಿದ್ದವು. ವಿಪತ್ತು ನಿರ್ವಹಣೆ ತಂಡ,ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಸಹಸ್ರಾರು ಕಾರ್ಯಕರ್ತರ ಜತೆಗೆ ಭಕ್ತರು ಭಾಗವಹಿಸಿದ್ದರು.

ಪಾದಯಾತ್ರೆಯುದ್ದಕ್ಕೂ ಭಕ್ತರು ಓಂ ನಮಃ ಶಿವಾಯ, ಓಂ ಶ್ರೀ ಮಂಜುನಾಥಾಯ ನಮಃ: ಎನ್ನುತ್ತಾ ಭಕ್ತಿಯಿಂದ ಸಾಗಿದರು.
ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಮಧ್ಯಾಹ್ನ 1 ಗಂಟೆಯಿಂದ ಉಜಿರೆ ಜನಾರ್ದನ ದೇವಸ್ಥಾನದ ಪರಿಸರದಲ್ಲಿ ಸೇರಿದರು.

ಹಲವು ಗ್ರಾಮಗಳಿಂದ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಹಲವಾರು ಧಾರ್ಮಿಕ ಮುಖಂಡರು, ಒಕ್ಕೂಟದ ಸದಸ್ಯರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಕೂಡ ಭಾಗವಹಿಸಿದ್ದರು.
ಹಾಗೇ ಉಜಿರೆಯಿಂದ ಧರ್ಮಸ್ಥಳದ ತನಕ ಅಲ್ಲಲ್ಲಿ ಪಾದಯಾತ್ರೆಯಲ್ಲಿ ಬಂದ ಭಕ್ತರಿಗೆ ಕುಡಿಯುವ ನೀರು,ಪಾನೀಯ ಹಾಗೂ ಪಾನಕದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕನ್ಯಾಡಿಯಲ್ಲಿ ಸೇವಾಭಾರತಿ ಸಂಸ್ಥೆಯವರು ವಿಶೇಷವಾದ ಪಾನಕ ಮಾಡಿ ಪಾದಯಾತ್ರಿಗಳಿಗೆ ವಿತರಿಸಿದರು.

ಹಾಗೇ ಟ್ಯಾಬ್ಲೋಗಳು ಎಲ್ಲರನ್ನೂ ಆಕರ್ಷಿಸಿತ್ತು. ಸ್ವಸಹಾಯ ಸಂಘದ ವಾರದ ಸಭೆ ನಡೆಸುತ್ತಿರುವ, ಜೆವಿಕೆ ಕಾರ್ಯಕ್ರಮ, ಪ್ರಗತಿ ಬಂಧು, ನಿರ್ವಹಣೆಯ ಕುರಿತಾದ ಟ್ಯಾಬ್ಲೋ, ಭಜನಾ ತರಬೇತಿ, ಶುದ್ಧಗಂಗಾ ಯೋಜನೆ, ನಮ್ಮೂರ ಕೆರೆ, ಜನ ಮಂಗಲ, ಜನಜಾಗೃತಿ, ಸಿರಿ ಗ್ರಾಮೋದ್ಯೋಗ, ಯಂತ್ರಶ್ರೀ, ವಾತ್ಸಲ್ಯ,ವಿಮೆ, ಜ್ಞಾನ ದೀಪ, ವಿಪತ್ತು ನಿರ್ವಹಣೆ, ರುಡ್ ಸೆಟ್, ಗಣ್ಯರೊಂದಿಗೆ ಖಾವಂದರು ಮೊದಲಾದ ಯೋಜನೆಗಳ ಕುರಿತ ಮಾಹಿತಿ ನೀಡುವ ಸುಮಾರು 17 ಆಕರ್ಷಕ ಟಾಬ್ಲೋಗಳು ಜನರನ್ನಾಕರ್ಷಿಸಿದವು.

ಮಾಣಿಲ ಶ್ರೀಗಳು ಹಾಗೂ ಶಾಸಕ ಹರೀಶ್ ಪೂಂಜ ಅವರು ಉಜಿರೆಯಿಂದ ಧರ್ಮಸ್ಥಳದವರೆಗೆ ಬರಿಗಾಲಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದರು.