ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ಇನ್ನೂ ಮುಂದೆ ಹಿಂದೂ ಭಕ್ತಾಧಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪ್ರಕಟಣೆಯನ್ನು ಹೊರಡಿಸಿದೆ.
ಈ ದೇವಸ್ಥಾನವೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದೂ, ಈ ದೇವಳಕ್ಕೆ ಸಂಬಂಧಪಟ್ಟ ಜಾಗದಲ್ಲಿ ಹಿಂದೂ ಭಕ್ತಾದಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ ಹಿಂದೂ ಭಕ್ತಾಧಿಗಳು ಹೊರತು ಪಡಿಸಿ ಇತರರು ವಾಹನ ಪಾರ್ಕಿಂಗ್ ಮಾಡಿ ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಇತರರು ಪಾರ್ಕಿಂಗ್ ಮಾಡಿ ಹೋದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಅದೇ ಪ್ಲೆಕ್ಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ದೇವಳದ ಹೊರಗಿನ ಪಂಚಾಕ್ಷರಿ ಮಂಟಪದಲ್ಲಿ ಸಾರ್ವಜನಿಕ ತಿಳುವಳಿಕೆಗಾಗಿ ಬೋರ್ಡ್ನಲ್ಲಿ ಈ ಪ್ರಕಟಣೆಯನ್ನು ಹಾಕಲಾಗಿದೆ.
ಬಜರಂಗ ದಳ, ಹಿಂದೂ ಜಾಗರಣೆ ವೇದಿಕೆ ಹಲವು ಹಿಂದೂ ಪರ ಸಂಘಟನೆಗಳು ಹಾಗೂ ಮುಖಂಡರು ದೇವಲಾಯಕ್ಕೆ ಸೇರಿದ ಗದ್ದೆಯಲ್ಲಿ ಅನ್ಯ ಧರ್ಮಿಯರ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದವು.ಅಲ್ಲದೆ ದೇವಳದ ಗದ್ದೆಯಲ್ಲಿ ಸರ್ಕಸ್ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳಿಗೂ ಅವಕಾಶ ನೀಡಬಾರದು ಎಂಬ ಬೇಡಿಕೆಯನ್ನೂ ಈ ಸಂಘಟನೆಗಳು ಇಟ್ಟಿದ್ದು, ಇದೀಗ ಇದರಲ್ಲಿ ಒಂದು ಬೇಡಿಕೆ ಹಲವು ವರ್ಷಗಳ ಬಳಿಕ ಈಡೇರಿದಂತಾಗಿದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸ್ವರ್ಣೋದ್ಯಮಿ ಮುಳಿಯ ಕೇಶವ ಪ್ರಸಾದ್ ರವರು ಆಯ್ಕೆಯಾದ ಬಳಿಕ ದೇವಸ್ಥಾನದ ಆಡಳಿತದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣರಾಗಿದ್ದು, 110 ಎಕರೆ ಹಡೀಲು ಬಿದ್ದ ಭೂಮಿಯಲ್ಲಿ ದೇವಸ್ಥಾನದ ನೆರವಿನಿಂದ ನಾಟಿ ಕಾರ್ಯ “ಭತ್ತ ಬೆಳೆಯೋಣ ಗದ್ದೆಗಿಳಿಯೋಣ” ಅಭಿಯಾನವನ್ನು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಅವರದು.
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿ ಎರಡು ರಾಜ್ಯಗಳ ನಡುವೆ ಪುತ್ತೂರು ಶಾಸಕ ಸಂಚಾರ ವ್ಯತ್ಯಾಯವಾದಾಗ ಸಂಜೀವ ಮಠ೦ದೂರು ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾದ ಇವರು, ದಕ ಜಿಲ್ಲೆಗೆ ಹೆಚ್ಚುವರಿ ಕೊರೊನಾ ಲಸಿಕೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಲಾಕ್ ಡೌನ್ ಅಥಾವ ವೀಕೆಂಡ್ ಕರ್ಪ್ಯೂ ಇತ್ಯಾದಿ ಕಠಿಣ ನಿಯಾಮಾವಳಿಗಳನ್ನು ಹೇರುವ ಬದಲು ಕೇರಳದ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡಕ್ಕೆ ಹೆಚ್ಚುವರಿ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ವ್ಯಾಕ್ಸಿನೆಶನ್ ಮಾಡುವ ಮೂಲಕ ಈ ಮಹಾಮಾರಿಯನ್ನು ನಿಯಂತ್ರಿಸಬಹುದು ಎಂದು ಮುಖ್ಯ ಮಂತ್ರಿಗಳಿಗೆ ವಿವರಿಸಿದ್ದರು .
ಇದೀಗ ಹಿಂದೂ ಭಕ್ತಾಧಿಗಳ ವಾಹನ ನಿಲುಗಡೆಗೆ ಅವಕಾಶ ನೀಡಿ ಉಳಿದವರ ವಾಹನಗಳಿಗೆ ಅವಕಾಶ ನಿರಾಕರಿಸುವ ಮೂಲಕ ವ್ಯವಸ್ಥಾಪನ ಸಮಿತಿಯೂ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.