ಮಡಿಕೇರಿ: ಇಲ್ಲಿನ ಆನೆಕಾಡು ಹೆದ್ದಾರಿಯ ಅರಣ್ಯ ಡಿಪೋ ಸಮೀಪದಲ್ಲಿ ಕಾಡಾನೆ ದಾಳಿಯಿಂದ ಒಮಿನಿ ಕಾರು ನಜ್ಜುಗುಜ್ಜಾಗಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗಾಯಗೊಂಡ ವ್ಯಕ್ತಿಯನ್ನು ಶರೀಫ್ ಎನ್ನಲಾಗಿದೆ. ಇವರ ಒಮಿನಿ ಕಾರನ್ನು ಅಡ್ಡ ಹಾಕಿ, ಕಾಡಾನೆ ಹಿಂಡುಗಳು ಕಾರಿನ ಮೇಲೆ ದಾಳಿ ನಡೆಸಿವೆ.
ಮಡಿಕೇರಿಯಿಂದ ಗದಗ ನಗರಕ್ಕೆ ಶರೀಫ್ ಎಂಬುವವರು ತಡರಾತ್ರಿ ತಮ್ಮ ಮಾರುತಿ ಒಮಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಆನೆಕಾಡು ಅರಣ್ಯ ಡಿಪೋ ಬಳಿ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ಕಾರಣದಿಂದ ತಮ್ಮ ಕಾರನ್ನು ನಿಲ್ಲಿಸಿದ್ದು, ಈ ವೇಳೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಗಳ ಪೈಕಿ ಹೆಣ್ಣಾನೆ ಶರೀಫ್ ಅವರಿದ್ದ ಕಾರಿನ ಮೇಲೆ ಎರಗಿದೆ. ಅದರ ಕೋಪಾಟೋಪಕ್ಕೆ ವ್ಯಾನ್ ನಜ್ಜುಗುಜ್ಜಾಗಿದ್ದು, ಒಳಗಿದ್ದವರ ಪೈಕಿ ಶರೀಫ್ ಅವರಿಗೆ ಗಂಭೀರ ಗಾಯವಾಗಿದೆ.
ಇನ್ನು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಬಾವನವರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.