ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೋಕಳ್ಳರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ನಿರಂತರ ಗೋಕಳ್ಳತನ ವಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಾಕಷ್ಟು ಪ್ರತಿಭಟನೆ ನಡೆಸಿದ ಹೊರತಾಗಿಯೂ ಗೋ ಕಳ್ಳರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ.
ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ಪರಿಸರದ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿ ಇದ್ದ ದನಗಳನ್ನು ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇತ್ತೀಚೆಗೆ ಕಾರ್ಕಳದ ಕೆಲವು ಮನೆಗಳ ಹಟ್ಟಿಗೆ ನುಗ್ಗಿ ಇದೇ ಮಾದರಿಯಲ್ಲಿ ಕಳ್ಳತನ ನಡೆಸಲಾಗಿತ್ತು. ಮನೆ ಮಾಲೀಕರಿಗೆ ಮಾರಕಾಸ್ತ್ರ ವನ್ನು ತೋರಿಸಿ ಬೆದರಿಸಿ ಹಸು ಕದ್ದೊಯ್ದ ಘಟನೆಗಳು ನಡೆದಿತ್ತು. ಬಳಿಕ ಸಚಿವ,ಸ್ಥಳೀಯ ಶಾಸಕ ಸುನಿಲ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಎಲ್ಲ ಠಾಣೆಗಳಲ್ಲೂ ಗೋಕಳ್ಳರನ್ನು ಪ್ರತ್ಯೇಕವಾಗಿ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಎಚ್ಚರಿಕೆಯ ಹೊರತಾಗಿಯೂ ಕಳ್ಳತನ ಮುಂದುವರೆದಿದೆ.
ಇಂದು ಮುಂಜಾನೆ 2.45 ರ ಸುಮಾರಿಗೆ ನಡೆದಿರುವ ಘಟನೆಯ ಇಂಚಿಂಚು ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಐಷಾರಾಮಿ ವಾಹನದಲ್ಲಿ ಬಂದ ಕಳ್ಳರು, ಆಹಾರ ತಿನ್ನಿಸುವ ನೆಪದಲ್ಲಿ ಪಕ್ಕಕ್ಕೆ ಬಂದು ಹಿಂಸಾತ್ಮಕವಾಗಿ ಹಸುವನ್ನು ಕದ್ದೊಯ್ಯುತ್ತಿರುವ ದೃಶ್ಯ ಇದರಲ್ಲಿದೆ. ಇಬ್ಬರು ದುಷ್ಕರ್ಮಿಗಳು ಈ ಕೃತ್ಯಯಲ್ಲಿ ಭಾಗಿಯಾಗಿದ್ದಾರೆ.
ಎರಡು ದಿನಗಳ ಹಿಂದೆಯೂ ಈ ಭಾಗದಲ್ಲಿ ಗೋ ಕಳ್ಳತನ ನಡೆದಿತ್ತು. ಹಾಡುಹಗಲೇ ಗೋಕಳ್ಳತನ ನಡೆಯುತ್ತಿದೆ ಎಂಬುದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪತ್ತೆಹಚ್ಚಿದರು. ನಕಲಿ ನಂಬರ್ ಪ್ಲೇಟ್ ನ್ನು ಬಳಸಿದ ಓಮಿನಿ ಕಾರ್ ನಲ್ಲಿ ದನಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಸ್ಥಳಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ತೆರಳಿದಾಗ ಕೂದಲೆಳೆಯ ಅಂತರದಲ್ಲಿ ದನಕಳ್ಳರು ವಾಹನದ ಜೊತೆಗೆ ಪರಾರಿಯಾಗಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಈಗ ಮತ್ತೊಮ್ಮೆ ಬೆಳಗಿನ ಜಾವ ಗೋಕಳ್ಳರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಈ ಹಿಂದೆ ಕಾರ್ಕಳದಲ್ಲಿ ಗೋಕಳ್ಳತನ ನಡೆದಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಠಾಣೆಯ ಮುಂದೆ ಭಜನೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ಇಷ್ಟಾದರೂ ಗೋಕಳ್ಳತನ ಕ್ಕೆ ಮಾತ್ರ ಉಡುಪಿ ಜಿಲ್ಲೆಯಲ್ಲಿ ಕಡಿವಾಣ ಬಿದ್ದಿಲ್ಲ.