ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ದ.ಕ. ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಸೆ.3ರಂದು ಕೇರಳದ ಕೊಯಿಕ್ಕೋಡ್ನಲ್ಲಿ 12 ವರ್ಷದ ಬಾಲಕ ನಿಫಾ ಸೋಂಕಿನಿಂದಾಗಿ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲೂ ಅಲರ್ಟ್ ಘೋಷಿಸಲಾಗಿದೆ. ಗಡಿ ಭಾಗದಿಂದ ಸಾಕಷ್ಟು ಜನರು ಆರೋಗ್ಯ ಹಾಗೂ ಶಿಕ್ಷಣ ಸಂಬಂಧಿಸಿ ಮಂಗಳೂರಿನ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸ ಲಾಗಿದ್ದು ಸಂಬಂಧಪಟ್ಟವರು ತತ್ಕ್ಷಣದಿಂದ ಮುಂಜಾಗ್ರತ ಕ್ರಮ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ನಿಫಾ ವೈರಸ್ ಝೊನಟಿಕ್ ರೋಗವಾಗಿದ್ದು ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಜ್ವರ, ತಲೆನೋವು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಅಲ್ಲದೆ ತೀವ್ರತರದ ಮಿದುಳಿನ ಉರಿಊತಕ್ಕೆ ಸಂಬಂಧಪಟ್ಟಂತೆ ತೀವ್ರ ರೋಗಲಕ್ಷಣ ಕಾಣಿಸಿಕೊಳ್ಳಬಹುದು ಹಾಗೂ ಮಾರಾಣಾಂತಿಕವಾಗಬಹುದು.
ಸಾಬೂನು, ನೀರಿನಿಂದ ಪದೇಪದೇ ಕೈ ತೊಳೆಯುವುದು, ಸೋಂಕು ಹರಡುವ ಪ್ರಾಣಿಗಳಾದ ಬಾವಲಿ, ಹಂದಿಗಳಿಂದ ದೂರ ಇರುವುದು, ಪ್ರಾಣಿಪಕ್ಷಿಗಳು ತಿಂದು ಬಿಟ್ಟಿರುವಂತಹ ಹಣ್ಣು-ಹಂಪಲನ್ನು ಸೇವಿಸದೇ ಇರುವುದು, ಸೋಂಕಿತ ವ್ಯಕ್ತಿಯ ದೇಹ ದ್ರವಗಳಿಂದ ರೋಗ ಹರಡುವ ಸಂಭವ ಇರುವುದರಿಂದ ಎಚ್ಚರಿಕೆ ವಹಿಸಬೇಕು.