ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಬಳಿ ಡಿ.15ರಂದು ಬೆಳಿಗ್ಗೆ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಸಹಸವಾರೆಯೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆಯ ಪತಿ ಹಾಗೂ ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
ಕಡಬ ತಾಲೂಕು ಪೆರಾಬೆ ಗ್ರಾಮದ ಅತ್ರಿಮಜಲು ನಿವಾಸಿ ದಿನೇಶ ಎಂಬವರ ಪತ್ನಿ ಗೀತಾ(30ವ.)ಮೃತಪಟ್ಟ ದುರ್ದೈವಿ . ದಿನೇಶ, ಗೀತಾ ಹಾಗೂ ಅವರ ಇಬ್ಬರು ಮಕ್ಕಳು ದ.15ರಂದು ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಸೌತಡ್ಕ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ನೆಲ್ಯಾಡಿ ಗ್ರಾಮದ ಕೊಂತ್ರಿಜಾಲು ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ದ್ವಿಚಕ್ರ ವಾಹನ ರಸ್ತೆಯ ಬದಿ ಮುಗುಚಿಬಿದ್ದಿದೆ. ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರೆಯಾಗಿದ್ದ ಗೀತಾರವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.
ಮದುವೆ ವಾರ್ಷಿಕೋತ್ಸವದಂದೇ ದುರಂತ:
ಡಿಸೆಂಬರ್ 15ರಂದು ದಿನೇಶ್ ಹಾಗೂ ಗೀತಾ ದಂಪತಿಯ ಮದುವೆ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ದಂಪತಿ ಮಕ್ಕಳ ಸಹಿತ ಬುಡೇರಿಯಾ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ಹೋಗಿ ಅಲ್ಲಿಂದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಸವಾರ ದಿನೇಶ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿತ್ತು. ಗಂಭೀರ ಗಾಯಗೊಂಡಿದ್ದ ಗೀತಾರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ತಡರಾತ್ರಿ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ದಿನೇಶ ರವರ ಅಣ್ಣ ತಿಮ್ಮಪ್ಪ ಗೌಡರವರು ನೀಡಿದ ದೂರಿನಂತೆ ದ್ವಿಚಕ್ರ ವಾಹನ ಸವಾರ ದಿನೇಶರವರ ವಿರುದ್ಧ ಕಲಂ 279, 337, 304(ಎ)ಐಪಿಸಿಯಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ಅಂಗಾರರ ವಿರುದ್ಧ ಗರಂ ಆಗುತ್ತಿರುವ ಕ್ಷೇತ್ರದ ಜನತೆ:
ಅಪಘಾತ ನಡೆದಿರುವ ಸ್ಥಳ ಸಚಿವ ಅಂಗಾರರು ಚುನಾಯಿತರಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದು, ಘಟನೆಯ ನಂತರ ಕ್ಷೇತ್ರದ ಜನತೆ ಸಚಿವರ ವಿರುದ್ಧ ಗರಂ ಆಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಕಡಬ ತಾಲೂಕಿನ ನೆಲ್ಯಾಡಿ, ಗೋಳಿತ್ತೊಟ್ಟು ಭಾಗದಲ್ಲಿ ಆಮೆ ನಡಿಗೆಯಲ್ಲಿ ಸಾಗುತ್ತಿರುವ ಅಭಿವೃದ್ಧಿ ಕಾರ್ಯ. 5 ಬಾರಿ ಶಾಸಕರಾಗಿದ್ದರೂ ಇನ್ನು ಕೆಲವು ಗ್ರಾಮಗಳಲ್ಲಿ ಸಮರ್ಪಕವಾದ ರಸ್ತೆ ಸೌಕರ್ಯ ಇಲ್ಲದಿರುವುದು ಈ ಮಾತಿಗೆ ಪುಷ್ಟಿ ನೀಡುತ್ತಿದೆ.