ಬೆಳ್ತಂಗಡಿ : ನಕ್ಸಲ್ ರಿಂದ ಕಾರು ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ನಕ್ಸಲ್ ನಾಯಕ ಚಿನ್ನಿ ರಮೇಶ್ @ಶಿವಕುಮಾರನನ್ನು ಮಂಗಳೂರು ಜಿಲ್ಲಾ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ಮಾಡಿದೆ.
ದಿನಾಂಕ 9-11-2013 ರಂದು ಬೆಳಗಿನ ಜಾವ ಎರಡು ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ಎಂಬಲ್ಲಿ ರಾಮಚಂದ್ರ ಭಟ್ ಎಂಬುವರ ಮನೆ ಅಂಗಳಕ್ಕೆ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಚಿನ್ನಿ ರಮೇಶ್ ಅಲಿಯಾಸ್ ರಮೇಶ್ ಅಲಿಯಾಸ್ ಶಿವಕುಮಾರ್ ಈತನು ಆರೋಪಿಗಳಾದ , ವಿಕ್ರಂ ಗೌಡ , ಸಾವಿತ್ರಿ, ಸುಂದರಿ ,ವಿಜಯ್ , ಜಯಣ್ಣ ಮತ್ತು ಇತರರೊಂದಿಗೆ ಸೇರಿಕೊಂಡು ಪ್ರವೇಶ ಮಾಡಿ ದೂರುದಾರ ರಾಮಚಂದ್ರ ಭಟ್ ಇವರ ಮನೆಯ ಬಾಗಿಲನ್ನು ಬಡಿದು ಹೊರಗೆ ಕರೆದರು. ಅವರು ಮನೆಯಿಂದ ಹೊರಗಡೆ ಬಾರದೆ ಇದ್ದಾಗ ಅವರ ಮನೆಯ ಅಂಗಳದಲ್ಲಿ ಇದ್ದ KA 18 V 5816 ಮೋಟಾರು ಸೈಕಲ್ ಮತ್ತು KA 21 N ಮಾರುತಿ ಓಮಿನಿ ಕಾರಿಗೆ ಬೆಂಕಿ ಹಚ್ಚಿ ಸುತ್ತು ಹಾಕಿದ್ದಾರೆ ಮತ್ತು ಆ ಮೂಲಕ ದೂರುದಾರರಿಗೆ ಸುಮಾರು 2,69,555/ರಷ್ಟು ನಷ್ಟ ಉಂಟಾಗಿರುತ್ತದೆ ಎಂದು ದೊಷಾರೋಪಣಾ ಪಟ್ಟಿಯನ್ನು ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.
ಆರೋಪಿಗಳ ಮೇಲೆ ಈ ಕೆಳಗಿನ ಕಾಯ್ದೆಯ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. UAPA- ಸೆಕ್ಷನ್ 10(B), ಮತ್ತು 13 Indian Arms Act section 3,25, IPC ಸೆಕ್ಷನ್ 143,147,148,447,435,427 ಜೊತೆಗೆ 149 ಆರಂಭಿಕವಾಗಿ ತನಿಖೆಯನ್ನು ಮಾಡಿರುವ ಬಂಟ್ವಾಳ ಡಿವೈಎಸ್ಪಿ ಯಾದ ರವೀಶ್ ಸಿಆರ್ ಇವರುಗಳು ಆರೋಪಿಗಳನ್ನು ಪತ್ತೆ ಮಾಡುವ ಸಾಧ್ಯತೆ ಕಡಿಮೆ ಇರುವುದರಿಂದ ಇದೊಂದು ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ಅಂತಿಮ ವರದಿಯನ್ನು ದಿನಾಂಕ 17-01-2017 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆ ಬಳಿಕ ಉಡುಪಿಯಲ್ಲಿ ಎಸ್ಪಿಯಾಗಿದ್ದ ಪ್ರಸ್ತುತ ರಾಜಕಾರಣಿಯಗಿರುವ ಅಣ್ಣಾಮಲೈ ರವರು ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್ ಎಂಬಾತನನ್ನು ವಶಕ್ಕೆ ಪಡೆದು ಈ ಪ್ರಕರಣದ ಆರೋಪಿತನೆಂದು ಗುರುತಿಸಿ ಈ ಪ್ರಕರಣವನ್ನು ಮರು ತನಿಖೆಗೆ ಆದೇಶ ಮಾಡಲಾಯಿತು.
ಮರು ತನಿಖೆಯನ್ನು ಆರಂಭಿಸಿದ ಡಿವೈಎಸ್ಪಿ ರವೀಶ್ ಸಿಆರ್ ಆರೋಪಿ ಚಿನ್ನಿ ರಮೇಶ್ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೇಲಿನಂತೆ ಆರೋಪಪಟ್ಟಿಯನ್ನು ತಯಾರಿಸಿ ದಿನಾಂಕ 127-2017 ರಂದು ಸಲ್ಲಿಸಿದ್ದರು.
ವಿಚಾರಣೆ ಆರಂಭಿಸಿದ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ ಒಟ್ಟು 22 ಸಾಕ್ಷಿಗಳಲ್ಲಿ 9 ಸಾಕ್ಷಿಗಳನ್ನು ವಿಚಾರಣೆ ಮಾಡಿತು. ಅದರಲ್ಲಿ 5 ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.2013 ರ ಸಮಯದಲ್ಲಿ ಕುತ್ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುತ್ತಿತ್ತು. ಈ ಸಂದರ್ಭ ದೂರುದಾರ ರಾಮಚಂದ್ರ ಭಟ್ ಅರಣ್ಯವಾಸಿಗಳನ್ನು ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಕ್ಸಲರು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಿನ್ನೆ ದಿನಾಂಕ 10-10-2022 ರಂದು ನ್ಯಾಯಾಲಯ ಅಂತಿಮ ನಿರ್ಣಯವನ್ನು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್ ನನ್ನು ದೋಷಮುಕ್ತಗೊಳಿಸಿದೆ.
ಚಿನ್ನಿ ರಮೇಶ್ ವಿರುದ್ಧ ಚಿಕ್ಕಮಗಳೂರಿನಲ್ಲಿ 4 ಕೇಸ್ ಗಳು ವಿಚಾರಣೆಯಲ್ಲಿ ಇದ್ದು ಪ್ರಸ್ತುತ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ದೂರುದಾರ ರಾಮಚಂದ್ರ ಭಟ್ ಆತನ ಪತ್ನಿ ಹಾಗೂ ಇತರ ಸಾಕ್ಷಿಗಳು prosecution ಪರವಾಗಿ ಸಾಕ್ಷ್ಯ ನೀಡಿದ್ದರು. ಆರೋಪಿ ಚಿನ್ನಿ ರಮೇಶ್ @ ಶಿವಕುಮಾರ್ ಪರವಾಗಿ ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿಯವರು ವಾದಿಸಿದರು.