ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಶಕ್ತಿ ಪೀಠಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿದೆ. ಇದೀಗ ಈ ದೇವಸ್ಥಾನಕ್ಕೆ ಮತ್ತೊಂದು ಹೆಗ್ಗಳಿಕೆ ಜೊತೆಯಾಗಿದೆ.ಅದು ಇಲ್ಲಿನ ದೇವರ ಪ್ರಸಾದಕ್ಕೆ ಸಂಬಂಧಿಸಿದ್ದು. ಭಕ್ತರಿಗೆ ನೀಡಲಾಗುವ ಉಚಿತ ಭೋಜನ ಪ್ರಸಾದ ಹಾಗೂ ದೇವರಿಗೆ ಅರ್ಪಿಸುವ ನೈವೇದ್ಯ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ ಎಂದು ಭಾರತ ಸರ್ಕಾರದ ಅಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣಪತ್ರದ ಲಭಿಸಿದೆ.
ದೇವಳದ ತಯಾರಿ ಕೊಠಡಿ ಅತ್ಯಂತ ಸುಸಜ್ಜಿತವಾಗಿದೆ. ಮಳೆ ನೀರು ಸೋರುವಿಕೆ ಇಲ್ಲ. ಗುಣಮಟ್ಟದ ಗೋಡೆ ಹಾಗೂ ಉತ್ತಮ ನೆಲಹಾಸು ಸೌಲಭ್ಯ ಹೊಂದಿದೆ. ತುಕ್ಕು ಹಿಡಿಯದ ಕಿಟಕಿ ಬಾಗಿಲುಗಳು, ಆಹಾರ ತಯಾರಿಸುವ ಪಾತ್ರಗಳ ಗುಣಮಟ್ಟ, ಉತ್ತಮ ಗಾಳಿ-ಬೆಳಕು ಸೌಲಭ್ಯ, ಆಹಾರವನ್ನು ಬಿಸಿ ಮತ್ತು ತಂಪು ಮಾಡಲು ಬಳಸುವ ಯಂತ್ರೋಕರಣಗಳ ಸೌಲಭ್ಯ, ಆಹಾರ ತಯಾರಿ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಬಳಸುವ ಕೊಠಡಿ, ಪಾತ್ರೆ ತೊಳೆಯುವ ನೀರು, ಆಹಾರ ತ್ಯಾಜ್ಯದ ವ್ಯವಸ್ಥಿತ ವಿಲೇವಾರಿ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ.
ಏನಿದು ಪ್ರಮಾಣಪತ್ರ?
ಭಕ್ತರಿಗೆ ತಯಾರಿಸುವ ಆಹಾರದ ಗುಣಮಟ್ಟ ಪರಿಶೀಲಿಸಲು ಆಹಾರ ತಯಾರಿ ಕಟ್ಟಡ, ಅಲ್ಲಿರುವ ಸೌಲಭ್ಯಗಳು, ಆಹಾರ ತಯಾರಿ ವಿಧಾನ, ಸ್ವಚ್ಛತೆ, ಆಹಾರ ತಯಾರಿ ಸಿಬ್ಬಂದಿಗೆ ನೀಡಿರುವ ತರಬೇತಿ ಆಧಾರದಲ್ಲಿ ಅಡಿಟ್ ಮಾಡಲಾಗಿದೆ. ಈ ಎಲ್ಲ ಅಂಶಗಳಿಗೆ ಪ್ರಾಮುಖ್ಯತೆ ನೀಡಿ ಆಹಾರ ತಯಾರಿ ಮಾಡುತ್ತಿರುವ ದೇವಸ್ಥಾನಕ್ಕೆ ಪ್ರಮಾಣಪತ್ರ ನೀಡಲಾಗುತ್ತದೆ.