ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಆರೋಪಿಗಳಾಗಿ , ಎಸ್ಐಟಿ ಅಧಿಕಾರಿಗಳ ತನಿಖೆಗೆ ಬೇಕಾಗಿದ್ದಂತ ಆರೋಪಿ ನರೇಶ್ ಗೌಡ ಹಾಗೂ ಶ್ರವಣ್ ಗೆ ನಿರೀಕ್ಷಣಾ ಜಾಮೀನು ದೊರೆಯುವ ಮೂಲಕ ರಿಲೀಫ್ ಸಿಕ್ಕಿದೆ.
ಇದರ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಶ್ರವಣ್ ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.ಆರೋಪಿಗಳಿಗೆ ಕೋರ್ಟ್ ನೀಡಿರುವುದು ಷರತ್ತು ಬದ್ಧ ನಿರೀಕ್ಷಣಾ ಜಾಮೀನಾಗಿರುವುದರಿಂದ ಅಗತ್ಯ ಬಿದ್ದರೆ ಬಂಧಿಸಿ ವಿಚಾರಣೆಗೊಳಪಡಿಸಲು ತನಿಖಾಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ. ವಿಚಾರಣೆಯಲ್ಲಿ ಬಂಧನದ ಅಗತ್ಯವಿದ್ದರೆ ಬಂಧಿಸಬಹುದು ಎಂದು ಕೋರ್ಟ್ ಹೇಳಿದೆ.
ಆದ್ದರಿಂದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಕ್ಕರೂ ಆರೋಪಿಗಳಿಗೆ ಬಂಧನದ ಭೀತಿ ತಪ್ಪಿಲ್ಲ, ಆರೋಪಿಗಳು ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. ಸಾಕ್ಷಿಗಳಿಗೆ ಬೆದರಿಕೆ ಒಡ್ಡುವಂತಿಲ್ಲ, ತನಿಖಾಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಬೇಕು. ಯಾವುದೇ ಷರತ್ತು ಉಲ್ಲಂಘನೆಯಾದರೂ ತಾನಾಗಿಯೇ ಜಾಮೀನು ರದ್ದಾಗಲಿದೆ ಎಂದು ಕೋರ್ಟ್ ಹೇಳಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನಲ್ಲಿ ಕಿಂಗ್ ಪಿನ್ ಗಳು ಎಂಬುದಾಗಿ ಆರೋಪಿಗಳಾದಂತ ನರೇಶ್ ಗೌಡ, ಶ್ರವಣ್ ಅವರನ್ನು ಕರೆಯಲಾಗುತ್ತಿತ್ತು. ಎಸ್ಐಟಿ ಅಧಿಕಾರಿಗಳಿಗೆ ತನಿಖೆಗೆ ಸಿಗದೇ ಮಾರ್ಚ್ 2ರಿಂದ ತಲೆಮರೆಸಿಕೊಂಡು, ಪ್ರಕರಣದಲ್ಲಿ ಜಾಮೀನು ಕೋರಿ ಬೆಂಗಳೂರಿನ 91ನೇ ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಆರೋಪಿಗಳಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.