ಕೊಡಗು : ಗುಡ್ಡ ಕುಸಿತದಿಂದ ಮಣ್ಣಿನಲ್ಲಿ ಮುಚ್ಚಿ ಹೋಗಿರುವ ಅರ್ಚಕ ನಾರಾಯಣ್ ಚಾರ್ ಕುಟುಂಬದ ಸಂಪತ್ತಿನ ಬಗ್ಗೆ ಭಯಾನಕ ಮಾಹಿತಿ ಲಭ್ಯವಾಗಿದೆ. ಮನೆಯಲ್ಲಿ 10 ಕೆಜಿ ಚಿನ್ನ, ಮೂಟೆಗoಟ್ಟಲೆ ಬೆಳ್ಳಿ, 30 ಲಕ್ಷ ಹಣ , ತಲಕಾವೇರಿ ಸುತ್ತಮುತ್ತ 100 ಎಕರೆ ಜಮೀನು ಇದೆ ಎನ್ನಲಾಗುತ್ತಿದೆ.
ಮುಂಡಾರುಮಲೈ ಅರಣ್ಯದ ಬಳಿ 50 ಎಕರೆ ಕೃಷಿ ಭೂಮಿ, ಚೀರಂಗಾರದಲ್ಲಿ 7 ಎಕರೆ ಕಾಫಿ ತೋಟ, ತಣ್ಣಿಮಾನಿ ಬಟ್ಟಕಾಡು ಬಳಿ 25 ಎಕರೆ ಏಲಕ್ಕಿ ತೋಟ , 25 ಎಕರೆ ಕಾಪಿ ತೋಟ. ಭಾಗಮಂಡಲ ಜೂನಿಯರ್ ಕಾಲೇಜು ಮೈದಾನದ ಬಳಿ 12 ಎಕರೆ ಜಮೀನು, 4 ಲಕ್ಷ ಮೌಲ್ಯದ 10 ಕ್ವಿಂಟಾಲ್ ಮೆಣಸಿನಕಾಳು, 8 ಲಕ್ಷ ಮೌಲ್ಯದ ಡಸ್ಟರ್ ಕಾರು, ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಮನೆ, 15 ಲಕ್ಷ ಮೌಲ್ಯದ 5 ಕ್ವಿಂಟಾಲ್ ಏಲಕ್ಕಿ, ಸೇರಿದಂತೆ ಇನ್ನಿತರ ಆಸ್ತಿ ಪತ್ರಗಳು ಕೂಡಾ ಮಣ್ಣಿನಲ್ಲಿ ಮುಚ್ಚಹೋಗಿವೆ ಎನ್ನಲಾಗುತ್ತಿದ್ದು, ಅರ್ಚಕರ ಕುಟುಂಬದ ಆಸ್ತಿ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರಬರುತ್ತಿವೆ.
ತಲಕಾವೇರಿ ದೇವಾಲಯದಲ್ಲಿ ಅರ್ಚಕರಾಗಿದ್ದ ನಾರಾಯಣಾಚಾರ್ ಇಷ್ಟೊಂದು ಆಸ್ತಿಯನ್ನ ಸಂಪಾದಿಸಿದ್ರ ಎಂಬ ಬಗ್ಗೆ ಸ್ಥಳಿಯರು ದಿಗ್ಬಾoತರಾಗಿದ್ದಾರೆ. ಜೊತೆಗೆ ಅರ್ಚಕರ ಮನೆಯಲ್ಲಿ ನಿಧಿ ಕೂಡ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ ನಾರಾಯಣ ಆಚಾರ್ ಅವರ ಕಾರು ಚಾಲಕ ಹೇಳುತ್ತಿರೋದೇ ಬೇರೆ, ನಾರಾಯಣ ಆಚಾರ್ ಕೇವಲ ಅರ್ಚಕರಲ್ಲ ಅವರೊಬ್ಬ ಕೊಟ್ಯಾಧಿಪತಿ. ಆಚಾರ್ ಬಳಿ ಕೋಟಿಗಟ್ಟಲೆ ಆಸ್ತಿ ಇತ್ತು ಎಂದಿದ್ದಾರೆ. ಹೌದು, ನಾರಾಯಣ ಆಚಾರ್ ಬಳಿ 10 ಎಕರೆ ಕಾಫಿ ತೋಟ, 35 ಎಕರೆ ಕಾಡು ತೋಟ ಅದರಲ್ಲಿ ಎರಡು ಎಕರೆ ಏಲಕ್ಕಿ ಬೆಳೆ ಇತ್ತು. ಕೇರಳ ರಸ್ತೆಯಲ್ಲಿ ಆಚರ್ 75 ಎಕರೆ ಭೂಮಿ ಹೊಂದಿದ್ದರು. ಬೆಂಗಳೂರಿನಲ್ಲಿ ಒಂದು ಬಂಗಲೆ. ತಲಕಾವೇರಿಯಲ್ಲಿ, ಬ್ರಹ್ಮಗಿರಿಯಲ್ಲಿ 40×40 ಅಳತೆಯ ಮನೆ ಇದೆ. ಮನೆಯಲ್ಲಿ ಕ್ವಿಂಟಾಲ್ಗಟ್ಟಲೆ ಮೆಣಸು, ಏಲಕ್ಕಿ ಇತ್ತು ಎಂದು ಅರ್ಚಕರ ಕಾರು ಚಾಲಕ ಜಯಂತ್ ಖಾಸಗಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ಧಿಗಳಿಂದ ಬೇಸರಗೊಂಡಿರುವ ಜಯಂತ್, ಆಚಾರ್ ಬಗ್ಗೆ ಸುಳ್ಳು ಅಪಪ್ರಚಾರ ಬೇಡ. ಅವರ ಮನೆಯಲ್ಲಿ ಅಪಾರ ಚಿನ್ನ ಇಲ್ಲ. ಮೆಣಸು ಏಲಕ್ಕಿ ಇದ್ದದ್ದು ನಿಜ. ಅವರು ನನ್ನನ್ನ ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದರು. ಎಲ್ಲಿ ಹೋದರೂ ನಮ್ಮ ಹುಡುಗಾ ಅಂತಾನೆ ಪರಿಚಯ ಮಾಡ್ತಿದ್ರು. ಅವರು ನನಗೆ ಗುರುಗಳ ಸಮಾನ ಎನ್ನುತ್ತಾ ದುಃಖಿತರಾದ್ರು.
ಗುರುವಾರ ಮುಂಜಾನೆ ಬ್ರಹ್ಮಗಿರಿ ಬೆಟ್ಟ ಕುಸಿದು, ನಾರಾಯಣ ಆಚಾರ್ಯರ ಕುಟುಂಬ ಕೊಚ್ಚಿಹೋಗಿತ್ತು. ಅದರ ಹಿಂದಿನ ದಿನ ಸಂಜೆ ಅವರ ಕಾರು ಚಾಲಕ ಜಯಂತ್ ನಾರಾಯಣ ಆಚಾರ್ಯರನ್ನು ಕೊನೆಯ ಬಾರಿ ಭೇಟಿ ಮಾಡಿದ್ದರು. ಆಚಾರ್ಯರನ್ನು ಮನೆಗೆ ಬಿಟ್ಟು ಜೀಪನ್ನು ತನ್ನ ಮನೆಗೆ ತೆಗೆದುಕೊಂಡಿದ್ದ ಹೋಗಿದ್ದರು ಜಯಂತ್. ಇದೀಗ ನಾರಾಯಣ ಆಚಾರ್ಯರ ನೆನಪಿಗಾಗಿ ಆ ಜೀಪ್ ಒಂದೇ ಉಳಿದಿದೆ. ಮರುದಿನ ಬೆಳಗ್ಗೆ 7 ಗಂಟೆಗೆ ಜಯಂತ್ ಆಚಾರ್ಯರ ಮನೆಗೆ ತೆರಳಿದಾಗ ಮನೆಮೇಲೆ ಗುಡ್ಡ ಕುಸಿದಿತ್ತು. ತಕ್ಷಣ ಪಿಡಿಓಗೆ ಕರೆ ಮಾಡಿ, ಮಕ್ಕಳಿಗೆ ಮಾಹಿತಿ ನೀಡಿದ್ದರು ಜಯಂತ್.