ಬೆಂಗಳೂರು: ದಾಖಲೆ ಮತಗಳಿಂದ ಗೆಲುವು ಪಡೆದು ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಭಿನಂದಿಸಿದ್ದಾರೆ. ಇದು ಜನಸಾಮಾನ್ಯರಿಗೆ ಸಿಕ್ಕಿದ ಗೆಲುವು ಎಂದಿದ್ದಾರೆ.
ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಒಬ್ಬ ಆದಿವಾಸಿ ಮಹಿಳೆಗೆ ರಾಷ್ಟ್ರಪತಿಯಾಗುವ ಅವಕಾಶ ಲಭಿಸಿದೆ. ಆದಿವಾಸಿ ಮಹಿಳೆಯಾದ ದ್ರೌಪದಿ ಮುರ್ಮು ಅವರು ತಾನು ಕಲಿಯುವ ವಾತಾವರಣ ಇಲ್ಲದೆ ಇದ್ದರೂ ಸುಶಿಕ್ಷಿತೆಯಾಗಿ ಕಲಿತು, ಸರಕಾರಿ ನೌಕರಿ, ಉಪನ್ಯಾಸಕಿ, ಕಾರ್ಪೊರೇಟರ್, ಶಾಸಕಿ, ಒಡಿಶಾ ಸರಕಾರದಲ್ಲಿ ಸಚಿವೆಯಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಜಾರ್ಖಂಡ್ ರಾಜ್ಯದ ರಾಜ್ಯಪಾಲೆಯಾಗಿ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದಾರೆ. ಭಾರತವು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಗೌರವಕ್ಕೆ ಪಾತ್ರವಾಗಲಿದೆ ಎಂದು ನಳಿನ್ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಮರ್ಥ ಹಾಗೂ ಅನುಭವವುಳ್ಳ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜನಪರ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ಡಿಎ ಪಕ್ಷಗಳ ಮುಖಂಡರಿಗೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.